ಕಾಸರಗೋಡು: ಜಿಲ್ಲಾ ಪಂಚಾಯಿತಿಯ ಜಿಲ್ಲಾ ಪಶುವೈದ್ಯಕೀಯ ಕೇಂದ್ರದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗಿರುವ ಡಿಜಿಟಲ್ ಕ್ಷ-ಕಿರಣ ಘಟಕವನ್ನು ರಾಜ್ಯ ಹೈನುಗಾರಿಕೆ ಅಭಿವೃದ್ಧಿ ಮತ್ತು ಪಶುಸಂಗೋಪನ ಖಾತೆ ಸಚಿವೆ ಜೆ. ಚಿಂಚುರಾಣಿ ಆನ್ಲೈನ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಹೈನುಗಾರರ ಬೇಡಿಕೆಗಳನ್ನು ಈಡೇರಿಸುವುದರ ಜತೆಗೆ, ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ರಾಜ್ಯ ಸರ್ಕಾರದ 100 ದಿನಗಳ ಕ್ರಿಯಾ ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಜಿಲ್ಲಾ ಪಂಚಾಯಿತಿಯ 2023-24 ನೇ ಸಾಲಿನ ಸಾರ್ವಜನಿಕ ಯೋಜನೆ ಜಾರಿಗೊಳಿಸಲಾಗಿದೆ.
ಹವಾಮಾನ ವೈಪರೀತ್ಯದಿಂದ ಜಾನುವಾರು ಮತ್ತು ಮೂಲಸೌಕರ್ಯ ನಷ್ಟಗೊಂಡಿರುವ ರೈತರಿಗೆ ದೊಡ್ಡ ಪರಿಹಾರವಾಗಿ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಪಶುಸಂಗೋಪನಾ ಕ್ಷೇತ್ರದಲ್ಲಿ ಬರುತ್ತಿರುವ ವಿನೂತನ ಆವಿಷ್ಕರಗಳನ್ನು ಸಕಾಲದಲ್ಲಿ ರೈತರಿಗೆ ತಲುಪಿಸುವುದು ಸರ್ಕಾರದ ಗುರಿಯಾಗಿದೆ. ಪಶುಸಂಗೋಪನಾ ಇಲಾಖೆ ಹಾಗೂ ಸರ್ಕರ ರೈತರಿಗೆ ಹೊಸ ಯೋಜನೆಗಳನ್ನು ಪರಿಚಯಿಸಲಿದೆ ಎಂದು ಸಚಿವರು ತಿಳಿಸಿದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣ ಎಕ್ಸ್ ರೇ ಯಂತ್ರದ ಸ್ವಿಚ್ ಆನ್ ನೆರವೇರಿಸಿದರು. ಹಾಲಿನ ಉತ್ಪಾದನೆಯ ಜೊತೆಗೆ ಹಾಲಿನಿಂದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಸಆಧ್ಯವಿದ್ದು, ಇದಕ್ಕಾಗಿ ಕೃಷಿಕರು ಮುಂದಾಗಬೇಕು ಎಂದು ತಿಳಿಸಿದರು.
ಪ್ರಕೃತಿ ವಿಕೋಪ ಮತ್ತು ಅತಿಯಾದ ಬಿಸಿಲಿನಿಂದಾಗಿ ಜಾನುವಾರುಗಳನ್ನು ಕಳೆದುಕೊಂಡ 118 ಹೈನುಗಾರರಿಗೆ ಸುಮಾರು ಇಪ್ಪತ್ತೆಂಟು ಲಕ್ಷ ರೂಪಾಯಿಗಳ ಧನಸಹಾಯ ವಿತರಿಸಲಾಯಿತು. ಜಿಲ್ಲಾ ಮೃಗ ಸಂರಕ್ಷಣಾಧಿಕಾರಿ ಡಾ. ಪಿ.ಕೆ.ಮನೋಜ್ ಕುಮಾರ್ ವರದಿ ಮಂಡಿಸಿದರು. ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗೀತಾಕೃಷ್ಣನ್, ಎಸ್.ಎನ್.ಸರಿತಾ, ಎಂ.ಮನು, ನರಗಸಭಾ ಕೌನ್ಸಿಲರ್ ಪಿ.ರಮೇಶ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಪಿ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.