ಕಾಸರಗೋಡು: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಗಲ್ಫ್ ಉದ್ಯೋಗಿಯನ್ನು ಊರಿಗೆ ಕರೆಸಿಕೊಂಡು ನಂತರ ಆತನ ಕೊಲೆಗೈದ ಪ್ರಕರಣದ ಮುಖ್ಯ ಆರೋಪಿ ಸೇರಿದಂತೆ ತಲೆಮರೆಸಿಕೊಂಡಿರುವ ಆರುಮಂದಿ ವಿರುದ್ಧ ಕ್ರೈಂ ಬ್ರಾಂಚ್ ತನಿಖೆ ತೀವ್ರಗೊಳಿಸಿದೆ. ಕೊಲೆ ಪ್ರಕರಣದ ಆರೋಪಿಗಳು ಸಂಚರಿಸಲು ಬಳಸಿದ್ದ ಕಾರನ್ನು ಪೈವಳಿಕೆಯಿಂದ ವಶಪಡಿಸಿಕೊಳ್ಳಲಾಗಿದೆ. ಕಾರಿನ ಮಾಲಿಕ ಅಸ್ಗರ್ಆಲಿ ಸೇರಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ರೆಡ್ಕಾರ್ನರ್ ನೋಟೀಸು ಜಾರಿಗೊಳಿಸಲು ತನಿಖಾ ತಂಡ ತೀರ್ಮಾನಿಸಿದೆ. ನೋಟೀಸು ಜಾರಿ ನಂತರ ಇಂಟರ್ಪೋಲ್ ಸಹಾಯದೊಂದಿಗೆ ಆರೋಪಿಗಳನ್ನು ಸೆರೆಹಿಡಿಯಲು ಸಾಧ್ಯವಾಗಲಿರುವುದಾಗಿ ಕ್ರೈಂ ಬ್ರಾಂಚ್ ತಿಳಿಸಿದೆ.
ವಿದೇಶದಲ್ಲಿದ್ದ ಪುತ್ತಿಗೆ ಪಂಚಾಯಿತಿ ಮುಗು ರಸ್ತೆ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಅವರನ್ನು 2022 ಜೂ. 26ರಂದು ಊರಿಗೆ ಕರೆಸಿ, ನಂತರ ಕಾರಿನಲ್ಲಿ ಅಪಹರಿಸಿ ಪೈವಳಿಕೆಯ ಜನವಾಸವಿಲ್ಲದ ಮನೆಯೊಂದರಲ್ಲಿ ಕೂಡಿಹಾಕಿ ಹಲ್ಲೆಗೈದು, ನಂತರ ಮರಕ್ಕೆ ತೂಗುಹಾಕಿ ಕೊಲೆಗೈಯಲಾಗಿದೆ. ನಂತರ ಮೃತದೇಹವನ್ನು ಬಂದ್ಯೋಡಿನ ಖಾಸಗಿ ಆಸ್ಪತ್ರೆಯೊಂದಕ್ಕೆ ತಲುಪಿಸಿ ತಂಡ ಅಲ್ಲಿಂದ ಪರಾರಿಯಾಗಿರುವ ಬಗ್ಗೆ ಕುಂಬಳೆ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಸ್ಥಳೀಯ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರೂ, ನಂತರ ಪ್ರಕರಣವನ್ನು ಕ್ರೈಂ ಬ್ರಾಂಚ್ಗೆ ವಹಿಸಿಕೊಡಲಾಗಿತ್ತು.