ಕಾಸರಗೋಡು: ಜಿಲ್ಲೆಯ ಜನತೆಗೆ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯೆಸುವ ಸಾಮಥ್ರ್ಯವಿಲ್ಲ ಎಂಬುದಾಗಿ ಶಾಸಕ ಪಿ.ಪಿ ಅನ್ವರ್ ಕಾಸರಗೋಡಿನಲ್ಲಿ ನೀಡಿರುವ ಹೇಳಿಕೆ ಖಂಡನೀಯವಾಗಿದ್ದು, ಕಾಸರಗೋಡಿನ ಜನತೆಯನ್ನು ಅವಹೇಳನಗೊಳಿಸುವಂತಿದೆ. ಹೇಳಿಕೆ ಹಿಂದಕ್ಕೆ ಪಡೆದು ಜಿಲ್ಲೆಯ ಜನತೆಯ ಕ್ಷಮೆ ಯಾಚಿಸುವತೆ ಬಿಜೆಪಿ ರಾಜ್ಯಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಜನರನ್ನು ಅವಹೇಳನ ಮಾಡಿರುವ ಅನ್ವರ್ ಅವರಿಗೆ ಜಿಲ್ಲೆಯ ಜನರ ಪ್ರತಿಕ್ರಿಯೆ ಸಾಮಥ್ರ್ಯದ ಬಗ್ಗೆ ಅರಿವಿಲ್ಲದಿರುವುದು ಇದರಿಂದ ಸಾಬೀತಾಗಿದೆ. ಇಲ್ಲಿನ ಜನತೆ ನಡೆಸಿರುವ ಪ್ರಬಲ ಹೋರಾಟದಿಂದ ಕಾಸರಗೋಡು ಹೊಸ ಜಿಲ್ಲೆ ರಚನೆಯಾಗಿದೆ. ಮಾರಕ ಎಂಡೋಸಲ್ಫಾನ್ ನಿಷೇಧ, ಫಸ್ನಾ ಕೊಲೆ ಪ್ರಕರಣ ಬೆಳಕಿಗೆ ಬಂದದ್ದು,
ಕನ್ನಡ ಭಾಷಾ ಅಲ್ಪಸಂಖ್ಯಾತರ ಹಕ್ಕು ಸಂರಕ್ಷಣೆಗಾಗಿ ನಡೆಸಿದ ಹೋರಾಟದಿಂದಾಗಿ ಕೇರಳ ಲೋಕ ಸೇವಾ ಆಯೋಗಕ್ಕೆ ತನ್ನ ಪರೀಕ್ಷೆಯನ್ನೇ ರದ್ದು ಪಡಿಸಬೇಕಾಗಿ ಬಂದ ಪ್ರತಿಭಟನೆಯ ಕಿಚ್ಚಿನ ತೀವ್ರತೆ ಅನ್ವರಿಗೆ ತಿಳಿದಿಲ್ಲ. ಗಡಿನಾಡು ಕಾಸರಗೋಡು ಜಿಲ್ಲೆ ಹಲವಾರು ಹೋರಾಟಗಳಿಗೆ ನೇತೃತ್ವ ನೀಡಿದೆ. ಸಹನಾಶೀಲರಗಿರುವ ಕಾಸರಗೋಡಿನ ಜನತೆಯನ್ನು ಅವಮಾನ ಮಾಡಿದರೆ ಸಹಿಸಿಕೊಳ್ಳಲಾಗದು. ಮಾಧ್ಯಮಗಳ ಮುಂದೆ ನಾಲಿಗೆ ಹರಿಹಾಯಬಿಡುವ ಅನ್ವರ್ ಅವರಿಗೆ ಜಿಲ್ಲೆಯ ಹೋರಾಟದ ಇತಿಹಾಸ ತಿಳಿಯದಿರುವುದು ವಿಪರ್ಯಾಸ. ಸಮಗ್ರ ಜಿಲ್ಲೆಯ ಜನರನ್ನು ಅಪಮಾನಗೈದಿರುವ ಅನ್ವರ್ ತಮ್ಮ ಹೇಳಿಕೆಯನ್ನು ಹಿಂದೆ ತೆಗೆದುಕೊಂಡು ಜನರಲ್ಲಿ ಕ್ಷಮೆಯಾಚಿಸಬೇಕು. ಈ ಬಗ್ಗೆ ಜಿಲ್ಲೆಯ ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ತಮ್ಮ ನಿಲುವನ್ನು ವ್ಯಕ್ತಪಡಿಸಬೇಕೆಂದು ಶ್ರೀಕಾಂತ ಆಗ್ರಹಿಸಿದ್ದಾರೆ.