ಕಾಸರಗೋಡು: ಕೆಂಪುಕಲ್ಲು ಕ್ವಾರಿ ಮಾಲಿಕರ ಕ್ಷೇಮಾಭಿವೃದ್ಧಿ ಸಂಘ ವಿವಿಧ ಬೇಡಿಕೆ ಮುಂದಿರಿಸಿ ನಡೆಸಿಕೊಂಡು ಬರುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರ ಹಿಂತೆಗೆಯಲಾಗಿದ್ದು, ಕೆಂಪುಕಲ್ಲು ಕ್ವಾರಿಗಳು ಯಥಾಪ್ರಕಾರ ಕಾರ್ಯಾರಂಭಿಸಿದೆ. ಸಂಘಟನೆ ಪದಾಧಿಕಾರಿಗಳು ಹಾಗೂ ಜಿಲ್ಲಾ ಟ್ರೇಡ್ ಯೂನಿಯನ್ ಒಳಗೊಂಡ ಸಂಯುಕ್ತ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಪ್ರಸಕ್ತ ಜಾರಿಯಲ್ಲಿರುವ ಕಾನೂನಿನ ಅಡಚಣೆ ಹೊರತುಪಡಿಸಬೇಕು, ಅರ್ಜಿದರರಿಗೆ ನ್ಯಾಯಯುತ ರಾಯಲ್ಟಿ ಪಾವತಿಸಿ ಪರ್ಮಿಟ್ ಲಭ್ಯಗೊಳಿಸಬೇಕು, ಈ ಬಗ್ಗೆ ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತ ಮುಂದಗುವಂತೆಯೂ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದೆ. ಸಿಐಟಿಯು, ಎಐಟಿಯುಸಿ, ಐಎನ್ಟಿಯುಸಿ, ಬಿಎಂಎಸ್, ಎಸ್ಟಿಯು ಮುಂತಾದ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೆಂಪುಕಲ್ಲು ಕ್ವಾರಿ ಮಾಲಿಕರ ವಿರುದ್ಧ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ಕೊನೆಗೊಳಿಸುವಂತೆ ಒತ್ತಾಯಿಸಿ ಸೆ. 20ರಿಂದ ಕ್ವಾರಿ ಕೆಲಸ ಸ್ಥಗಿತಗೊಳಿಸಲಾಗಿದ್ದು, ಕ್ವಾರಿಮಾಲಿಕರ ಸಂಘದ ಪದಾಧಿಕಾರಿಗಳು ಕಾಸರಗೋಡು ವಿದ್ಯಾನಗರದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನೂ ಆರಂಭಿಸಿದ್ದರು.