HEALTH TIPS

ಸಂಸದೀಯ ಸಮಿತಿ ಸಭೆ: ಭಾರತ-ಚೀನಾ ಗಡಿ ಒಪ್ಪಂದ, ಭಾರತ-ಕೆನಡಾ ಸಂಬಂಧ ಕುರಿತು ಚರ್ಚೆ

 ವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಭಾರತ-ಚೀನಾ ಗಡಿ ಒಪ್ಪಂದ, ಭಾರತ-ಕೆನಡಾ ಸಂಬಂಧ ಹಾಗೂ ಇಸ್ರೇಲ್-ಪ್ಯಾಲೆಸ್ಟೀನ್ ಸಂಘರ್ಷದ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ.

ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಇಸ್ರೇಲ್-ಪ್ಯಾಲೆಸ್ಟೀನ್ ಸಂಘರ್ಷದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚೀನಾ ಮತ್ತು ಭಾರತ ನಡುವಣ ವಾಸ್ತವ ಗಡಿ ರೇಖೆಯಲ್ಲಿ ಪೂರ್ವ ಲಡಾಖ್‌ ಬಳಿ ನಾಲ್ಕು ವರ್ಷಗಳಿಂದ ಇದ್ದ ಅನಿಶ್ಚಿತ ಸ್ಥಿತಿ ಅಂತ್ಯಗೊಳಿಸಲು ಚೀನಾದ ಜೊತೆ ಒಪ್ಪಂದಕ್ಕೆ ಬರಲಾಗಿದೆ ಎಂದು ಭಾರತ ಈಚೆಗೆ ಪ್ರಕಟಿಸಿತ್ತು.

ಈ ಕುರಿತು ಪ್ರಸ್ತಾಪಿಸಿದ ತರೂರ್‌, ಚೀನಾ ಜತೆಗಿನ ಗಸ್ತು ತಿರುಗುವ ಒಪ್ಪಂದವನ್ನು ಘೋಷಿಸುವ ವೇಳೆ ಉಭಯ ದೇಶಗಳು ಏಕೆ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಿಲ್ಲ. ಒಪ್ಪಂದದ ಬಗ್ಗೆ ಚೀನಾ ಏಕೆ ಉತ್ಸಾಹ ತೋರುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ವಿಕ್ರಮ್ ಮಿಶ್ರಿ, ಭಾರತ-ಚೀನಾ ಒಪ್ಪಂದವು 2020ರಲ್ಲಿ ಗಡಿ ಬಿಕ್ಕಟ್ಟಿಗೂ ಮೊದಲಿನ ವಾತಾವರಣವನ್ನು ಪುನಃಸ್ಥಾಪಿಸುತ್ತದೆ ಎಂದು ಭರವಸೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಇದೇ ವೇಳೆ ಭಾರತ-ಕೆನಡಾ ಸಂಬಂಧ, ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ಹಾಗೂ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ರಾಜಕೀಯ ಕಾರ್ಯವೈಖರಿ ಬಗ್ಗೆ ವಿಕ್ರಮ್ ಮಿಶ್ರಿ ವಿವರಿಸಿದ್ದಾರೆ.

ಇಸ್ರೇಲ್-ಪ್ಯಾಲೆಸ್ಟೀನ್ ಸಂಘರ್ಷ ಕುರಿತಂತೆ ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯಲ್ಲಿ ಕೈಗೊಂಡ ಕೆಲವು ನಿರ್ಣಯಗಳಿಂದ ಭಾರತ ಏಕೆ ದೂರವಿತ್ತು ಎಂಬ ತರೂರ್‌ ಪ್ರಶ್ನೆಗೆ ಉತ್ತರಿಸಿರುವ ಮಿಶ್ರಿ, ಭಾರತ-ಇಸ್ರೇಲ್‌ ನಡುವಿನ ಒಪ್ಪಂದದ ಭಾಗವಾಗಿ ಸುಮಾರು 9 ಸಾವಿರ ನಿರ್ಮಾಣ ಕಾರ್ಮಿಕರು ಮತ್ತು 700 ಕೃಷಿ ಕಾರ್ಮಿಕರು ಸೇರಿದಂತೆ 30 ಸಾವಿರ ಭಾರತೀಯರು ಇಸ್ರೇಲ್‌ನಲ್ಲಿ ನೆಲೆಸಿದ್ದಾರೆ. ಮಾತುಕತೆಯ ಮೂಲಕ ಬಿಕ್ಕಟ್ಟನ್ನು ಬಗೆಹರಿಸಲು ಭಾರತ ಬಯಸುತ್ತದೆ ಎಂಬ ನಿಲುವನ್ನು ಅವರು ಪುನರುಚ್ಚರಿಸಿದ್ದಾರೆ.

ಇಸ್ರೇಲ್-ಪ್ಯಾಲೆಸ್ಟೀನ್ ಸಂಘರ್ಷದ ವಿಚಾರವಾಗಿ ಭಾರತ ಯಾವುದೇ ಪಕ್ಷಪಾತ ಧೋರಣೆ ಅನುಸರಿಸುತ್ತಿಲ್ಲ. ಪ್ಯಾಲೆಸ್ಟೀನ್ ನಿರಾಶ್ರಿತರಿಗೆ ಸಹಾಯ ಮಾಡಲು ಭಾರತ ಮಾನವೀಯ ನೆರವನ್ನು ಒದಗಿಸಿದೆ ಎಂದೂ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ವಿವರಿಸಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತರೂರು, 'ಇದು ಒಳ್ಳೆಯ ಚರ್ಚೆ' ಎಂದು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries