ಕಾಸರಗೋಡು: 'ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಕರ್ನಾಟಕ' ಸಂಸ್ಥೆ ನೀಡುವ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕಾಸರಗೋಡಿನ ಖ್ಯಾತ ಮನೋರೋಗ ತಜ್ಞೆ ಡಾ. ಸುಜಯ ಪಾಂಡ್ಯನ್ ಆಯ್ಕೆಯಾಗಿದ್ದಾರೆ. ಕಳೆದ 25 ವರ್ಷಗಳಿಂದ ಗಡಿನಾಡಿನಲ್ಲಿ ವೈದ್ಯೆ ಬಡಜನತೆಗೆ ನೀಡುತ್ತಿರುವ ನಿಸ್ವಾರ್ಥ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಾಸರಗೋಡಿನ ಹೃದಯ ಭಾಗದಲ್ಲಿ ಕ್ಲಿನಿಕ್ ನಡೆಸುತ್ತಿದ್ದು ವಾರಕ್ಕೆ ಮೂರು ದಿನಗಳ ಕಾಲ ವಿವಿಧ ಊರುಗಳಲ್ಲಿ ಮನೋವೈದ್ಯಕೀಯ ಕ್ಯಾಂಪ್ ಗಳನ್ನು ನಡೆಸುತ್ತಿದ್ದು ಈಗಾಗಲೇ ಸಾವಿರಾರು ಸಂತ್ರಸ್ತರಿಗೆ ಚಿಕಿತ್ಸೆ ನೀಡಿದ ಕೀರ್ತಿ ಇವರು ಹೊಂದಿದ್ದಾರೆ. ಕೌನ್ಸೆಲಿಂಗ್ ಚಿಕಿತ್ಸೆಯ ಮೂಲಕ ಮನೋರೋಗವನ್ನು ಗುಣಪಡಿಸುವ ಇವರು ಮೂಲತಃ ಪುತ್ತೂರು ನಿವಾಸಿಯಾಗಿದ್ದಾರೆ.
ತಮ್ಮ ಈ ನಿಸ್ವಾರ್ಥ ಸೇವೆಗೆ 25 ವರ್ಷ ತುಂಬಿರುವ ಹಿನ್ನೆಲೆಯಲ್ಲಿ, ಚಿಕಿತ್ಸೆಯಿಂದ ಗುಣಮುಖರಾಗಿರುವ ಅಸಹಾಯಕ ಮಾನಸಿಕ ಸಂತ್ರಸ್ತರನ್ನು ಜತೆ ಸೇರಿಸಿ ಸ್ವಉದ್ಯೋಗ ಒದಗಿಸುವ ಕಲ್ಪನೆಯ ಕನಸು ಡಾ. ಸುಜಯ ಪಾಂಡಿಯನ್ ಅವರದ್ದಾಗಿದೆ. ಇದಕ್ಕಾಗಿ ಟ್ರಸ್ಟ್' ಒಂದನ್ನು ಸ್ಥಾಪಿಸುವ ಬಗ್ಗೆ ತಜ್ಞರ ಜತೆ ಮಾತುಕತೆ ನಡೆಸುತ್ತಿರುವ ಮಧ್ಯೆ ಡಾ. ಸುಜಯ ಅವರನ್ನು ಪ್ರಶಸ್ತಿ ಅರಸಿಕೊಂಡು ಬಂದಿದೆ.
ನವಂಬರ್ 27ರಂದು ಬೆಂಗಳೂರಿನ ಪುರಭವನದಲ್ಲಿ (ಟೌನ್ ಹಾಲ್) ನಡೆಯುವ ಅದ್ದೂರಿ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಡಾ. ಸುಜಯ ಪಾಂಡಿಯನ್ ಅವರಿಗೆ ನೀಡಿ ಗೌರವಿಸುವುದಾಗಿ 'ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕ' ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಶ್ರವಣ ಲಕ್ಷ್ಮಣ್ ಅವರು ತಿಳಿಸಿದ್ದಾರೆ.