ಬದಿಯಡ್ಕ: ಆರಾಧನಾಲಯಗಳು ಕಾಲಕ್ಕಣುಗುಣವಾಗಿ ಪುನರುತ್ಥಾನಗೊಳ್ಳುವುದರಿಂದ ಸಾಮಾಜಿಕ ಏಕತೆ ಬೆಳೆಯುತ್ತದೆ. ಸಮಾಜದ ಎಲ್ಲಾ ವಿಭಾಗದ ಜನರು ಒಗ್ಗಟ್ಟಿನಿಂದ ಒಂದೆಡೆ ಸೇರುವಲ್ಲಿ ದೇವಾಲಯ, ಮಂದಿರಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ಶ್ರೀಮದ್.ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.
ಕೊಲ್ಲಂಗಾನ ಸಮೀಪದ ಪಜ್ಜದಲ್ಲಿ ಪುನರ್ ನವೀಕರಣಗೊಳ್ಳುತ್ತಿರುವ ಶ್ರೀಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ನವೀಕರಣ ಕಾಮಗಾರಿಯ ವಿಜ್ಞಾಪನಾ ಪತ್ರ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಸರಣಕ್ಕಿರುವ ಆನ್ ಲೈನ್ ಮಾಹಿತಿ ಪತ್ರವನ್ನು ಗುರುವಾರ ಸಂಜೆ ಶ್ರೀಮಠದಲ್ಲಿ ಬಿಡುಗಡೆಗೊಳಿಸಿ ಅವರು ಅನುಗ್ರಹ ಸಂದೇಶ ನೀಡಿದರು.
ಇಂದಿನ ಕಾಲಕ್ಕೆ ಎಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ ಭಜನಾ ಮಂದಿರಗಳು ನಿರ್ಮಾಣಗೊಳ್ಳಬೇಕು. ತನ್ಮೂಲಕ ಹೊಸ ತಲೆಮಾರಿಗೆ ಆಧ್ಯಾತ್ಮಿಕ, ಧಾರ್ಮಿಕ ಮೌಲ್ಯಗಳನ್ನು ಪರಿಚಯಿಸಲು ಕಾರಣವಾಗುತ್ತದೆ. ಸಮಾಜದ ಸಮಸ್ತ ಜನರ ಏಳ್ಗೆಗೆ ಇಂತಹ ಶಕ್ತಿ ಕೇಂದ್ರಗಳು ಮುನ್ನೆಲೆಯಲ್ಲಿರಬೇಕು. ಪಜ್ಜದಲ್ಲಿ ನಿರ್ಮಾಣಗೊಳ್ಳಲಿರುವ ಮಂದಿರ ಪ್ರತಿಯೊಬ್ಬ ಭಕ್ತನ ಹೃದಯ ಅರಳುವ, ದುಃಖ-ದುಮ್ಮಾನಗಳನ್ನು ಕಳೆಯುವ ಕೇಂದ್ರವಾಗಿ ಬೆಳಗಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಮಂದಿರದ ಪುನರ್ ನಿರ್ಮಾಣ ಸಮಿತಿ ರಕ್ಷಾಧಿಕಾರಿ ಪ್ರೊ.ಎ.ಶ್ರೀನಾಥ್ ಕಾಸರಗೋಡು, ಸೇವಾ ಸಮಿತಿ ಅಧ್ಯಕ್ಷ ಪ್ರಮೋದ್ ಕುಮಾರ್ ಮೇಲತ್, ಕಾರ್ಯದರ್ಶಿ ಕೃಷ್ಣ ನಾಯ್ಕ ಅರಂತೋಡು, ಖಜಾಂಜಿ ತೇಜಸ್ ಕುಮಾರ್ ಅರಂತೋಡು, ಮಂದಿರ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ತಿರುಮಲೇಶ್ವರ ಭಟ್ ಪಜ್ಜ, ಪ್ರಧಾನ ಕಾರ್ಯದರ್ಶಿ ವಾಮನ್ ನಾಯ್ಕ, ಖಜಾಂಜಿ ನವೀನ ಕುಮಾರ್ ಪಜ್ಜ, ಸದಸ್ಯರಾದ ವಾಸುದೇವ ನಾಯ್ಕ, ಶೇಷಪ್ಪ ನಾಯ್ಕ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಗುರುವಾರ ಬೆಳಿಗ್ಗೆ ಮಂದಿರದಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರಿಂದ ಗಣಪತಿ ಗವನ, ಸಾಮೂಹಿಕ ಪ್ರಾರ್ಥನೆ, ಸಂಜೆ ಭಜನೆ ಮೊದಲಾದ ಕಾರ್ಯಕ್ರಮಗಳು ನಡೆಯಿತು.