ಕಾಸರಗೋಡು: ಪಾಣತ್ತೂರಿನಲ್ಲಿ ಅಲೆಮಾರಿ ಜನಾಂಗದ ಯುವತಿಯ ಮಾನಭಂಗಕ್ಕೆ ಯತ್ನಿಸಿ, ನಂತರ ತಲೆಗೆ ಬಡಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಾಣತ್ತೂರು ನಿವಾಸಿ ರಮೀಸ್ ಎಂಬಾತನನ್ನು ರಾಜಾಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯುವತಿ ಪಾಣತ್ತೂರಿನಲ್ಲಿ ಚಿಂದಿ ಆಯುತ್ತಿದ್ದ ಸಂದರ್ಭ ಸ್ಥಳಕ್ಕಾಗಮಿಸಿದ ರಮೀಸ್, ಆಕೆಯ ಮಾನಭಂಗಕ್ಕೆ ಯತ್ನಿಸಿದ್ದಾನೆ. ಈ ಮಧ್ಯೆ ಯುವತಿ ಕೈಯಲ್ಲಿದ್ದ ಕಬ್ಬಿಣದ ಸಲಾಕೆಯಿಂದ ತಡೆಯಲು ಯತ್ನಿಸುತ್ತಿದ್ದಂತೆ ರಮೀಸ್ ಆಕೆಯ ಕೈಯಿಂದ ಕಬ್ಬಿಣದ ಸಲಾಕೆ ಕಸಿದು, ಆಕೆಯ ತಲೆಗೆ ಬಲವಾಗಿ ಬಡಿದ್ದಾನೆ. ಇದರಿಂದ ಬೊಬ್ಬಿಟ್ಟಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಥಳಿತದಿಂದ ಗಂಭೀರ ಗಾಯಗೊಂಡ ಯುವತಿಯನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದು, ತಲೆಗೆ ಐದು ಹೊಲಿಗೆ ಹಾಕಲಾಗಿದೆ.