ಕೋಲ್ಕತ್ತ: ಅತ್ಯಾಚಾರ ಎಸಗಿ, ಹತ್ಯೆ ಮಾಡುವ ದುಷ್ಕರ್ಮಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ನಟ ದೇವ್ ಹೇಳಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯ ಜಯನಗರ ಪ್ರದೇಶದ ಹಳ್ಳಿಯೊಂದರ ನಿರ್ಜನ ಪ್ರದೇಶದಲ್ಲಿ ಒಂಬತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ.
ಈ ಘಟನೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ದೇವ್, ಆರೋಪಿಗಳು ತಪ್ಪಿತಸ್ಥರೆಂದು ಗುರುತು ಪತ್ತೆಯಾದ ತಕ್ಷಣ ಅವರನ್ನು ಗುಂಡಿಕ್ಕಿ ಕೊಲ್ಲಬೇಕು. ಅವರನ್ನೂ ಜೈಲಿಗೆ ಕಳುಹಿಸಿ ನಮ್ಮ ತೆರಿಗೆ ಹಣವನ್ನೂ ವ್ಯರ್ಥ ಮಾಡಬಾರದು ಎಂದು ಹೇಳಿದ್ದಾರೆ.
ದೇಶದಲ್ಲಿ ಕಾನೂನು ಬಲಿಷ್ಠವಾಗಿದೆ. ಆದರೂ ನಮ್ಮ ತಾಯಿ ಮತ್ತು ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅತ್ಯಾಚಾರ ಎಸಗುವ ಆರೋಪಿಗಳಿಗೆ ಎಂತಹ ಶಿಕ್ಷೆ ವಿಧಿಸಬೇಕೆಂದರೆ ಭವಿಷ್ಯದಲ್ಲಿ ಯಾರೂ ಇಂತಹ ಕೃತ್ಯಗಳಲ್ಲಿ ಭಾಗಿಯಾಗಬೇಕೆಂಬ ಯೋಚನೆಯೂ ಸುಳಿಯಬಾರದು. ಅಂತಹ ಭಯ ಹುಟ್ಟಿಸಬೇಕು. ಇಲ್ಲದಿದ್ದರೆ ಇಂತಹ ಕೃತ್ಯಗಳನ್ನು ತಡೆಯಲು ಸಾಧ್ಯವಿಲ್ಲ ಎಂದೂ ತಿಳಿಸಿದ್ದಾರೆ.