ನವದೆಹಲಿ: ಬಾಂಗ್ಲಾದೇಶದಲ್ಲಿ ಈಚೆಗೆ ನಡೆದ ದುರ್ಗಾಪೂಜಾ ಮಂಟಪದ ಮೇಲಿನ ದಾಳಿ ಹಾಗೂ ಕಾಳಿ ದೇವಸ್ಥಾನದ ಕಿರೀಟ ಕಳವು ಪ್ರಕರಣ ಸಂಬಂಧ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
'ರಾಜಧಾನಿ ಢಾಕಾದ ತಂತಿ ಬಜಾರ್ನಲ್ಲಿನ ಪೂಜಾ ಮಂಟಪದ ಮೇಲೆ ನಡೆದ ದಾಳಿ ಹಾಗೂ ಸತ್ಖಿರದಲ್ಲಿರುವ ಜೆಶೋರೇಶ್ವರಿ ಕಾಳಿ ದೇವಸ್ಥಾನದ ಕಿರೀಟ ಕಳ್ಳತನ ಪ್ರಕರಣಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ.
'ದುಷ್ಕರ್ಮಿಗಳು ವ್ಯವಸ್ಥಿಯವಾಗಿ ದೇಗುಲಗಳನ್ನು ಅಪವಿತ್ರಗೊಳಿಸುವುದರೊಂದಿಗೆ, ಹಾನಿಯನ್ನೂ ಉಂಟು ಮಾಡುತ್ತಿದ್ದಾರೆ. ಹಲವಾರು ದಿನಗಳಿಂದ ನಾವು ಇದಕ್ಕೆ ಸಾಕ್ಷಿಯಾಗಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು, ವಿಶೇಷವಾಗಿ ಹಬ್ಬದ ಸಮಯದಲ್ಲಿ ಹಿಂದೂಗಳು, ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಸರ್ಕಾರಕ್ಕೆ ಮನವಿ ಮಾಡುತ್ತೇವೆ' ಎಂದು ವಿದೇಶಾಂಗ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಕರಣಗಳ ಹಿನ್ನೆಲೆ
ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಕಾಳಿ ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದ್ದ ಕಿರೀಟ ಗುರುವಾರ ತಡರಾತ್ರಿ ಕಳ್ಳತನವಾಗಿದೆ ಎಂದು ವರದಿಯಾಗಿದೆ.
ಸತ್ಖಿರದ ಶ್ಯಾಮನಗರದಲ್ಲಿರುವ ಜೆಶೋರೇಶ್ವರಿ ದೇವಾಲಯದಲ್ಲಿ ಈ ಘಟನೆ ನಡೆದಿತ್ತು. ಕಿರೀಟ ಕಾಣೆಯಾಗಿರುವುದನ್ನು ದೇವಾಲಯದ ಸ್ವಚ್ಛತಾ ಸಿಬ್ಬಂದಿ ಗಮನಿಸಿದ್ದರು. ಕಳ್ಳರ ಪತ್ತೆಗಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದರು. ಮೋದಿ ಅವರು 2021ರಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರ ಸ್ಮರಣಾರ್ಥ, ದೇವಾಲಯಕ್ಕೆ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು.
ಇದಲ್ಲದೇ ಇಲ್ಲಿನ ತಂತಿ ಬಜಾರ್ನಲ್ಲಿ ಪೂಜಾ ಮಂಟಪದ ಮೇಲೆ ಶುಕ್ರವಾರ ಬಾಂಬ್ ದಾಳಿ ನಡೆಸಲಾಗಿತ್ತು.