ಕಣ್ಣೂರು: ಕಣ್ಣೂರು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ನವೀನ್ಬಾಬು ಅವರ ಮೃತದೇಹ ಅವರು ವಾಸಿಸುತ್ತಿರುವ ಕ್ವಾಟ್ರಸ್ನೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ. ನವೀನ್ಬಾಬು ಅವರಿಗೆ ಅವರ ಹುಟ್ಟೂರಾದ ಪತ್ತನಂತಿಟ್ಟ ಜಿಲ್ಲೆಗೆ ವರ್ಗಾವಣೆಯಾಗಿದ್ದು, ಈ ನಿಟ್ಟಿನಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಕಣ್ಣೂರು ಜಿಪಂ ಅಧ್ಯಕ್ಷೆ ಆಡಿದ ಮಾತಿನಿಂದ ಮನನೊಂದು ಕೃತ್ಯವೆಸಗಿರುವುದಾಗಿ ಆರೋಪ ಕೇಳಿ ಬರುತ್ತಿದೆ. ವಿಪರ್ಯಾಸವೆಂದರೆ, ಬೀಳ್ಕೊಡುಗೆ ಸಮಾರಂಭಕ್ಕೆ ಜಿಪಂ ಅಧ್ಯಕ್ಷೆ ಪಿ.ಪಿ ದಿವ್ಯಾ ಅವರಿಗೆ ಆಹ್ವಾನವಿಲ್ಲದಿದ್ದರೂ, ಸಮಾರಂಭದಲ್ಲಿ ಭಾಗವಹಿಸಿ ನವೀನ್ಬಾಬು ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ತನಗೆ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ತನ್ನ ವಿರುದ್ಧವೇ ಭ್ರಷ್ಟಾಚಾರದ ಆರೋಪ ಹೊರಿಸಿದ ಜಿಪಂ ಅಧ್ಯಕ್ಷೆ ನಿಲುವಿನಿಂದ ಖಿನ್ನತೆಗೊಳಗಾಗಿ ಕೃತ್ಯವೆಸಗಿರುವುದಾಗಿ ಸಂಶಯಿಸಲಾಗಿದೆ. ಕಾರ್ಯಕ್ರಮದ ನಂತರ ಕ್ವಾಟ್ರಸ್ಗೆ ವಾಹನದಲ್ಲಿ ತೆರಳಿದ್ದು, ಅರ್ಧದಲ್ಲಿ ವಾಹನ ನಿಲ್ಲಿಸಿ ಕ್ವಾಟ್ರಸ್ ಕಡೆಗೆ ನಡೆದು ಹೋಗಿದ್ದಾರೆ. ಮರುದಿನ ಪತ್ತನಂತಿಟ್ಟ ಜಿಲ್ಲೆಯ ಹುಟ್ಟೂರಿಗೆ ರೈಲಿನಲ್ಲಿ ತಲುಪಬೇಕಾಗಿದ್ದು, ಮನೆಯವರು ಬೆಳಗ್ಗೆ ರೈಲ್ವೆ ನಿಲ್ದಾಣದಲ್ಲಿ ಕಾದಿದ್ದರೂ, ರೈಲಲ್ಲಿ ಆಗಮಿಸದಿರುವುದರಿಂದ ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಎಡಿಎಂ ನವೀನ್ಬಾಬು ನಿಗೂಢ ಸಾವು ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದು, ಜಿಪಂ ಅಧ್ಯಕ್ಷೆ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟನೆಗೆ ಸಜ್ಜಾಗಿದೆ.
ಎಡಿಎಂ ನವೀನ್ಬಾಬು ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಣ್ಣೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅ. 16ರಂದು ಬಿಜೆಪಿ ಹರತಾಳಕ್ಕೆ ಕರೆನೀಡಿದೆ. ನವೀನ್ಬಾಬು ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಗಳವಾರ ಕಣ್ಣೂರು ನಗರದಲ್ಲಿ ವಿವಿಧ ಸಂಘಟನೆಗಳು ಮೆರವಣಿಗೆ ನಡೆಸಿತು. ನವೀನ್ಬಾಬು ಈ ಹಿಂದೆ ಕಾಸರಗೋಡು ಎಡಿಎಂ ಆಗಿ ಕಾರ್ಯನಿರ್ವಹಿಸಿದ್ದು, ಉತ್ತಮ ಅಧಿಕಾರಿಯಾಗಿ ಖ್ಯಾತಿ ಗಳಿಸಿದ್ದರು.