HEALTH TIPS

ನೀಲೇಶ್ವರ ಪಟಾಕಿ ಸ್ಫೋಟ: ನಾಲ್ಕಕ್ಕೇರಿದ ಸಾವಿನ ಸಂಖ್ಯೆ

Top Post Ad

Click to join Samarasasudhi Official Whatsapp Group

Qries

 ನೀಲೇಶ್ವರ : ಇಲ್ಲಿನ ಅಂಞೂಟ್ಟಂಬಲಂ ವೀರರ್‌ಕಾವ್ ದೈವಸ್ಥಾನದಲ್ಲಿ ಅ. 28ರ ಮಧ್ಯರಾತ್ರಿ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ ನಾಲ್ಕಕ್ಕೇರಿದೆ.

ಕಣ್ಣೂರು ಬೇಬಿ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೊಯ್ಯಂಕೋಟ ಕಿಣಾವೂರ್ ನಿವಾಸಿ ಆಟೊ ಚಾಲಕ ಸಿ.ಸಂದೀಪ್ (38) ನ.2ರಂದು ರಾತ್ರಿ ಸಾವಿಗೀಡಾಗಿದ್ದರು.

ಭಾನುವಾರ ಇನ್ನೂ ಮೂವರು ಮೃತರಾಗಿದ್ದಾರೆ ಎಂದು ಕಾಸರಗೋಡು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಕೋಯಿಕ್ಕೋಡ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ಜಿಲ್ಲೆ ಚೆರುವತ್ತೂರು ನಿವಾಸಿ ಶಿಬಿನ್ ರಾಜ್ (19) ಭಾನುವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ. ಕರಿಂದಳಂ ಕೋಟ ನಿವಾಸಿ ಬಿಜು ಮತ್ತು ಕಿಣಾವೂರು ನಿವಾಸಿ ರತೀಶ್ ಕೂಡ ಭಾನುವಾರ ಸಾವಿಗೀಡಾಗಿದ್ದಾರೆ. ಇವರಿಬ್ಬರೂ ಕೋಯಿಕ್ಕೋಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿಸಲಾಗಿದೆ.

ರತೀಶ್, ಬಿಜು ಮತ್ತು ಕಿಣಾವೂರ್‌ನ ಸಂದೀಪ್ ಗೆಳೆಯರಾಗಿದ್ದರು. ರತೀಶ್‌ಗೆ ಮದುವೆಯಾಗಿಲ್ಲ. ಕಯ್ಯೂರಿನಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದ ಅವರಿಗೆ ಈಚೆಗೆ ನೀಲೇಶ್ವರದ ಆಹಾರ ನಿಗಮದ ಗೋಡೌನ್‌ನಲ್ಲಿ ಕೆಲಸ ಸಿಕ್ಕಿತ್ತು. ತಾಯಿ ಮತ್ತು ಇಬ್ಬರು ಸಹೋದರಿಯರು ಇದ್ದಾರೆ.

ಕೊಲ್ಲಂಪಾರದಲ್ಲಿ ವ್ಯಾನ್ ಚಾಲಕನಾಗಿದ್ದ ಬಿಜು ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಶಿಬಿನ್ ರಾಜ್‌ಗೆ ತಂದೆ, ತಾಯಿ ಮತ್ತು ಸಹೋದರಿ ಇದ್ದಾರೆ.

ಐದು ದೈವಗಳು ನೆಲೆಯಾಗಿರುವ 'ಸ್ಥಾನ'ದಲ್ಲಿ ಅ.29ರಂದು ಮೂವಾಳಂಕುಳಿ ಚಾಮುಂಡಿಯ ತೆಯ್ಯಂ ನಡೆಯಬೇಕಾಗಿತ್ತು. ಇದರ ಅಂಗವಾಗಿ ಹಿಂದಿನ ರಾತ್ರಿ 'ವೆಳ್ಳಾಟ್ಟಂ' ಆರಂಭವಾಗುತ್ತಿದ್ದಂತೆ ಪಟಾಕಿ ಸಿಡಿಸಲಾಗಿತ್ತು. ಅದರ ಕಿಡಿಯೊಂದು ಛಾವಣಿ ಇಲ್ಲದ ಶೆಡ್‌ನಲ್ಲಿ ಇರಿಸಿದ್ದ ಪಟಾಕಿ ಮೇಲೆ ಬಿದ್ದಿತ್ತು. ತಕ್ಷಣ ಸ್ಫೋಟವಾಗಿತ್ತು. ಗಾಯಗೊಂಡ 158 ಮಂದಿಯನ್ನು ಮಂಗಳೂರಿನ ಮೂರು ಆಸ್ಪತ್ರೆ, ಕಾಸರಗೋಡು, ಕಾಞಂಗಾಡ್‌, ಕಣ್ಣೂರು ಮತ್ತು ಕೋಯಿಕ್ಕೋಡ್‌ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು.

ಪಟಾಕಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾದ ದೈವಸ್ಥಾನದ ಅಧ್ಯಕ್ಷ ಸೇರಿ ಮೂವರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿತ್ತು. ಅದನ್ನು ಜಿಲ್ಲಾ ನ್ಯಾಯಾಲಯ ರದ್ದುಮಾಡಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries