ಡಾಕಾ: ಹಿಂದೂ ಸಂಘಟನೆ 'ಸಮ್ಮಿಲಿತ್ ಸನಾತನಿ ಜಾಗರಣ ಜೋತೆ'ಯ ವಕ್ತಾರ ಚಿನ್ಮಯ್ ಕೃಷ್ಣ ದಾಸ್ ಅವರ ಬಂಧನ ನ್ಯಾಯಯುತವಲ್ಲ. ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಗುರುವಾರ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನ ಅವಾಮಿ ಲೀಗ್ ಪಕ್ಷದ ಖಾತೆ ಮೂಲಕ ಟ್ವೀಟ್ ಮಾಡಿರುವ ಅವರು, 'ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಹಾಗೂ ಅವರ ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿಯನ್ನು ಖಂಡಿಸುತ್ತೇನೆ.
'ಸನಾತನ ಧರ್ಮದ ಹಿರಿಯ ಮುಖಂಡರೊಬ್ಬರನ್ನು ಅನ್ಯಾಯವಾಗಿ ಬಂಧಿಸಲಾಗಿದೆ. ಚಿತ್ತಗಾಂಗ್ನಲ್ಲಿ ದೇವಾಲಯಗಳಿಗೆ ಬೆಂಕಿ ಹಚ್ಚಲಾಗಿದೆ. ಮಸೀದಿ, ದೇವಾಲಯ, ಚರ್ಚ್ ಸೇರಿದಂತೆ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆದಿದೆ. ಅವುಗಳನ್ನು ಹಾನಿಗೊಳಿಸಿ, ಲೂಟಿ ಮಾಡಲಾಗಿದೆ. ಎಲ್ಲಾ ಧರ್ಮೀಯರ ಧಾರ್ಮಿಕ ಸ್ವಾತಂತ್ರ್ಯವನ್ನು ಸರ್ಕಾರ ಖಾತ್ರಿಪಡಿಸಬೇಕು' ಎಂದಿದ್ದಾರೆ.
'ಬಾಂಗ್ಲಾದೇಶದಲ್ಲಿ ಸದ್ಯ ಇರುವ ಮಧ್ಯಂತರ ಸರ್ಕಾರವು ಅವಾಮಿ ಲೀಗ್ ಪಕ್ಷದ ಮುಖಂಡರನ್ನು ಹಿಂಸಿಸುತ್ತಿದೆ. ಪಕ್ಷದ ಬಹಳಷ್ಟು ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಸ್ಥೆಗಳ ಸದಸ್ಯರನ್ನು ಹತ್ಯೆ ಮಾಡಲಾಗಿದೆ. ಈಗ ಉಳಿದವರ ಮೇಲೆ ಹಲ್ಲೆ, ದಾಳಿ, ಕಾನೂನು ಕ್ರಮ ಕೈಗೊಳ್ಳುವುದು ಮತ್ತು ಬಂಧನದ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಇಂಥ ಸರ್ವಾಧಿಕಾರಿ ಕ್ರಮವನ್ನು ಖಂಡಿಸುತ್ತೇನೆ' ಎಂದು ಹಸೀನಾ ಹೇಳಿದ್ದಾರೆ.
আওয়ামী লীগ সভানেত্রী বঙ্গবন্ধুকন্যা শেখ হাসিনার বিবৃতিঃ
— Awami League (@albd1971) November 28, 2024
চট্টগ্রামে একজন আইনজীবীকে হত্যা করা হয়েছে, এই হত্যার তীব্র প্রতিবাদ জানাচ্ছি। এই হত্যাকাণ্ডের সঙ্গে যারা জড়িত তাদেরকে খুঁজে বের করে দ্রুত শাস্তি দিতে হবে। এই ঘটনার মধ্য দিয়ে চরমভাবে মানবাধিকার লঙ্ঘিত হয়েছে। একজন… pic.twitter.com/b7yjlyj9Et
'ಚಿತ್ತಗಾಂಗ್ನಲ್ಲಿ ವಕೀಲರೊಬ್ಬರ ಹತ್ಯೆಯಾಗಿದೆ. ಇದನ್ನು ನಾನು ಭಲವಾಗಿ ಖಂಡಿಸುತ್ತೇನೆ. ಹಂತಕರನ್ನು ಕೂಡಲೇ ಪತ್ತೆ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು. ಇದರಲ್ಲಿ ಯಾವುದೇ ವಿಳಂಬವಾಗಬಾರದು. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಹತ್ಯೆಗೀಡಾದ ವಕೀಲರು ತಮ್ಮ ಕೆಲಸ ಮಾಡುತ್ತಿದ್ದರು. ಅವರನ್ನು ಹತ್ಯೆಗೈದವರು ಭಯೋತ್ಪಾದಕರು. ಅವರು ಯಾರೇ ಆಗಿರಲಿ, ಅವರಿಗೆ ಶಿಕ್ಷೆಯಾಗಬೇಕು' ಎಂದಿದ್ದಾರೆ.
'ಅಕ್ರಮವಾಗಿ ಅಧಿಕಾರ ಕಬಳಿಸಿರುವ ಪ್ರಸಕ್ತ ಮಧ್ಯಂತರ ಸರ್ಕಾರವು ಸಾಮಾನ್ಯ ಜನರ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದಾಳಿ ನಡೆಸುತ್ತಿದೆ. ಇದು ಖಂಡನೀಯ. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ' ಎಂದು ಹಸೀನಾ ಅರೋಪಿಸಿದ್ದಾರೆ.
2024ರ ಆರಂಭದಲ್ಲಿ ಸರ್ಕಾರಿ ಕೋಟಾ ಕುರಿತು ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ದೇಶದಾದ್ಯಂತ ವ್ಯಾಪಿಸಿದ ಪರಿಣಾಮ, ಶೇಖ್ ಹಸೀನಾ ಅವರು ದೇಶ ತೊರೆಯುವಂತಾಯಿತು. ಬಾಂಗ್ಲಾದೇಶದಲ್ಲಿ ಸದ್ಯ ಉಸ್ತುವಾರಿ ಸರ್ಕಾರವಿದೆ. ನೋಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನಸ್ ಅವರು ಮುಖ್ಯಸ್ಥರಾಗಿದ್ದಾರೆ.