ಹೈದರಾಬಾದ್: ಜನರ ಸುರಕ್ಷತೆಗಿಂತ ಸಿನಿಮಾ ಪ್ರಚಾರ ಹೆಚ್ಚು ಮುಖ್ಯವಲ್ಲ. ಇದನ್ನು ಚಿತ್ರರಂಗದವರು ಸೇರಿದಂತೆ ಎಲ್ಲರೂ ಅರ್ಥಮಾಡಿಕೊಳ್ಳಬೇಕು ಮತ್ತು ಅದರಂತೆಯೇ ನಡೆದುಕೊಳ್ಳಬೇಕೆಂದು ತೆಲಂಗಾಣದ ಡಿಜಿಪಿ ಜಿತೇಂದರ್ ಭಾನುವಾರ ಹೇಳಿದ್ದಾರೆ.
ಪೊಲೀಸರು ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ಅಭಿಪ್ರಾಯಗಳನ್ನು ಹೊಂದಿರುವುದಿಲ್ಲ.
ಆದರೆ ನಾಗರಿಕರಿಗೆ ಎಲ್ಲರೂ ಜವಾಬ್ದಾರರಾಗಿರಬೇಕು ಎಂದು 'ಪುಷ್ಪಾ-2' ಚಿತ್ರದ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
ಸಿನಿಮಾಗಳಲ್ಲಿ ಅವರು ನಾಯಕರು. ಆದರೆ ಸಮಾಜದ ಸಮಸ್ಯೆಗಳನ್ನು ಅವರು ಅರ್ಥಮಾಡಿಕೊಳ್ಳಬೇಕು. ಜನರ ಸುರಕ್ಷತೆಗಿಂತ ಸಿನಿಮಾ ಪ್ರಚಾರ ಹೆಚ್ಚು ಮುಖ್ಯವಲ್ಲ. ಇಂತಹ ಘಟನೆಗಳು ನಡೆಯಬಾರದು. ನಾಗರಿಕರ ಸುರಕ್ಷತೆ ಮತ್ತು ಅವರ ಭದ್ರತೆಯೇ ಮೊದಲ ಆದ್ಯತೆಯಾಗಿರಬೇಕೆಂದು ಜಿತೇಂದರ್ ತಿಳಿಸಿದ್ದಾರೆ.
'ಪುಷ್ಪಾ-2' ಚಿತ್ರದ ಪ್ರದರ್ಶನದ ವೇಳೆ ನೂಕುನುಗ್ಗಲು ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಆಕೆಯ ಎಂಟು ವರ್ಷದ ಮಗ ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.