ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಬಿಜೆಪಿಯನ್ನು ಗುರಿಯಾಗಿಸಿ, ಉಭಯ ಪಕ್ಷಗಳು ಆಶ್ವಾಸನೆಗಳನ್ನು ಈಡೇರಿಸಿಲ್ಲ ಹಾಗೂ ಮಾಲಿನ್ಯ, ನಾಗರಿಕ ಸೌಲಭ್ಯಗಳು ಮತ್ತು ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ವಿಫಲವಾಗಿವೆ ಎಂದು ಆರೋಪಿಸಿ ದೆಹಲಿ ಕಾಂಗ್ರೆಸ್ ಘಟಕವು 12 ಅಂಶಗಳನ್ನು ಒಳಗೊಂಡ 'ಶ್ವೇತಪತ್ರ'ವನ್ನು ಬುಧವಾರ ಬಿಡುಗಡೆ ಮಾಡಿದೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಐಸಿಸಿ ಖಜಾಂಚಿ ಅಜಯ್ ಮಾಕೆನ್ ಅವರು, ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
'ಜನಲೋಕಪಾಲ್ ಚಳವಳಿಯ ಕಾರಣದಿಂದ ಎಎಪಿ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ ಭ್ರಷ್ಟಾಚಾರ ನಿಗ್ರಹ ದಳ 'ಜನಲೋಕಪಾಲ್' ಸ್ಥಾಪಿಸುವಲ್ಲಿ ಪಕ್ಷವು ವಿಫಲವಾಗಿದೆ' ಎಂದರು.
'ದೇಶದಲ್ಲಿ ವಂಚನೆಗೆ ರಾಜ ಇರುವುದಾದರೆ ಅದು ಕೇಜ್ರಿವಾಲ್ ಅವರೇ ಆಗಿರುತ್ತಾರೆ. ಹೀಗಾಗಿಯೇ ಕೇಜ್ರಿವಾಲ್ ಅವರ ಸರ್ಕಾರ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಕುರಿತು ಶ್ವೇತಪತ್ರದೊಂದಿಗೆ ಬಂದಿದ್ದೇವೆ' ಎಂದು ಹೇಳಿದರು.
'ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರು ಅಡ್ಡಿಪಡಿಸುವುದಾದರೆ, ಪಂಜಾಬ್ನಲ್ಲಿ ಜನಲೋಕಪಾಲ್ ಏಕೆ ಸ್ಥಾಪಿಸಿಲ್ಲ. ಅಲ್ಲಿ ಅಡ್ಡಿಪಡಿಸುವವರು ಯಾರು? ಅಲ್ಲಿ ಬಹುಮತದ ಸರ್ಕಾರ ಅಸ್ತಿತ್ವದಲ್ಲಿದೆ ಅಲ್ಲವೇ' ಎಂದು ಪ್ರಶ್ನಿಸಿದರು.
'ದೆಹಲಿಯನ್ನು ಲಂಡನ್ನಂತೆ ಮಾಡುವುದಾಗಿ ಹೇಳುತ್ತಾರೆ. ಆದರೆ ಮಾಲಿನ್ಯದಲ್ಲಿ ದೆಹಲಿಗೆ ಪ್ರಥಮ ಸ್ಥಾನ ನೀಡಿದ್ದಾರೆ' ಎಂದು ಟೀಕಿಸಿದರು.
'ಎಎಪಿ ಜೊತೆಗಿನ ಮೈತ್ರಿ ತಪ್ಪು ನಿರ್ಧಾರವಾಗಿದ್ದು, ಅದನ್ನು ಸರಿಪಡಿಸಬೇಕಿದೆ' ಎಂದು ಅವರು ಅಭಿಪ್ರಾಯಪಟ್ಟರು.
'ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷವು ದುರ್ಬಲವಾಗಿದೆ. 2013ರಲ್ಲಿ ಎಎಪಿಗೆ ನಾವು 40 ದಿನ ಬೆಂಬಲ ಘೋಷಿಸಿದ್ದೇ ಇದಕ್ಕೆ ಕಾರಣ' ಎಂದು ವಿಷಾದ ವ್ಯಕ್ತಪಡಿಸಿದರು.
ಈ ಬಗ್ಗೆ ಎಎಪಿ ಅಥವಾ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.