ನವದೆಹಲಿ: ಭೂತಾನ್ ದೊರೆ ಜಿಗ್ಮ್ ಖೇಸರ್ ನಮ್ಗೇಲ್ ವಾಂಗ್ಚುಕ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ದೌಡಾಯಿಸಿದ್ದಾರೆ.
ಇಂದು ಮಧ್ಯಾಹ್ನದ ವೇಳೆಗೆ ದೆಹಲಿಗೆ ಆಗಮಿಸಿದ ಜಿಗ್ಮ್ ಖೇಸರ್ ಅವರು ನಿಗಮ್ಬೋಧ್ ಘಾಟ್ ತಲುಪಿ ಅಲ್ಲಿ ಪ್ರಧಾನಿ ಮೋದಿ ಸೇರಿದಂತೆ ಇತರ ಗಣ್ಯರ ಜೊತೆ ಸಿಂಗ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
ಯುಪಿಎ 1 ಮತ್ತು 2 ರ ಅವಧಿಯಲ್ಲಿ ಜಿಗ್ಮ್ ಖೇಸರ್ ಅವರು ಮನಮೋಹನ್ ಸಿಂಗ್ ಅವರೊಂದಿಗೆ ಉತ್ತಮ ರಾಜತಾಂತ್ರಿಕ ಬಾಂಧವ್ಯ ಹೊಂದಿದ್ದರು. ಹಲವು ಸಲ ಭೇಟಿಯಾಗಿದ್ದರು.
ಇನ್ನು ಮನಮೋಹನ ಸಿಂಗ್ ಅವರ ಪಾರ್ಥಿವ ಶರೀರ ಶನಿವಾರ ದೆಹಲಿಯ ನಿಗಮ್ಬೋಧ್ ಘಾಟ್ಗೆ ತಲುಪಿದೆ.
ಸಿಂಗ್ ಅವರ ಪಾರ್ಥಿವ ಶರೀರವನ್ನು ಹೊತ್ತ ಮೆರವಣಿಗೆ ವಾಹನವು ಬೆಳಿಗ್ಗೆ 11.30ರ ಸುಮಾರಿಗೆ ನಿಗಮ್ಬೋಧ್ ಘಾಟ್ ತಲುಪಿದ್ದು, ಅಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ರಕ್ಷಣ ಸಚಿವ ರಾಜನಾಥ ಸಿಂಗ್ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಅಂತಿಮ ದರ್ಶನ ಪಡೆದಿದ್ದಾರೆ.
