ಜೈಪುರ: ಕರ್ನಾಟಕವು ಸೇರಿದಂತೆ ದೇಶದ ವಿವಿಧೆಡೆ ₹2 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಸೈಬರ್ ವಂಚನೆಯಲ್ಲಿ ಭಾಗಿಯಾಗಿದ್ದ ಗ್ಯಾಂಗ್ನ ಮುಖ್ಯಸ್ಥನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ 2022ರಲ್ಲಿ 'ಟೆಕ್ಬಲ್ ಟೆಕ್' ಎಂಬ ಕಂಪನಿ ಆರಂಭಿಸಿ, ಜನರಿಗೆ ಸೈಬರ್ ತರಬೇತಿ ನೀಡಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಕರ್ನಾಟಕದ ಕಾಂತಪ್ಪ ಬಾಬು ಚವ್ಹಾಣ ಎಂಬುವರು ಮಂಗಳವಾರ ನೀಡಿದ ದೂರಿನ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಶ್ರೀಗಂಗಾನಗರ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಯಾದವ್ ತಿಳಿಸಿದ್ದಾರೆ.
ಅಜಯ್ ಆರ್ಯ ಎಂಬಾತನ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸಿ, ₹10 ಲಕ್ಷ ನಗದು, ಮೂರು ಸಿಪಿಯು, ಆರು ಮೊಬೈಲ್ ಫೋನ್, ಎಂಟು ಎಟಿಎಂ ಕಾರ್ಡ್, ಮೂರು ಪ್ಯಾನ್ ಕಾರ್ಡ್, ಅಂದಾಜು ₹85 ಲಕ್ಷ ಮೌಲ್ಯದ ಐಷಾರಾಮಿ ಕಾರು ಮತ್ತು ಸೈಬರ್ ವಂಚನೆಗೆ ಸಂಬಂಧಿಸಿದ ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಅಜಯ್ ಆರ್ಯ, ದೀಪಕ್ ಆರ್ಯ, ಲಜಪತ್ ಆರ್ಯ, ಸೌರಭ್ ಚಾವ್ಲಾ, ಈತನ ಪತ್ನಿ ಸಲೋನಿ ಚಾವ್ಲಾ, ಕರಮ್ಜಿತ್ ಸಿಂಗ್, ಬಲ್ಜಿತ್ ಸಿಂಗ್ ಹಾಗೂ ರಾಜೇಂದ್ರ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
'ಅಜಯ್ ಆರ್ಯ ಮತ್ತು ಆತನ ಸಹಚರರು ಕರ್ನಾಟಕದಲ್ಲಿ ಸಹಸ್ರಾರು ಜನರಿಂದ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು, ₹2 ಸಾವಿರ ಕೋಟಿ ಮೊತ್ತದೊಂದಿಗೆ ಪರಾರಿಯಾಗಿ ಶ್ರೀಗಂಗಾನಗರಕ್ಕೆ ಬಂದಿದ್ದರು' ಎಂದು ಕಾಂತಪ್ಪ ಪುರಾಣಿ ಆಬಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.