ಹಮೀರ್ಪುರ: ಹಿಮಾಚಲ ಪ್ರದೇಶದ ತೌಣಿದೇವಿ ಮಂಡಲ ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ಸತತ ನಾಲ್ಕು ವರ್ಷಗಳಿಂದ ಪಂಚಾಯಿತಿ ಸಭೆಗಳಿಗೆ ಗೈರಾದ ಕಾರಣ ಅವರಿಗೆ ₹5 ದಂಡ ವಿಧಿಸಲಾಗಿದೆ. 'ಹಲವು ಬಾರಿ ಎಚ್ಚರಿಕೆ ನೀಡಿದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿದ್ದಾರೆ.
ಇದರಿಂದ ಇಲಾಖಾ ಅಭಿವೃದ್ದಿ ಕಾಮಗಾರಿಗೆ ತೊಂದರೆಯಾಗುತ್ತಿದ್ದು, ಎಲ್ಲ ಸದಸ್ಯರ ಒಪ್ಪಿಗೆ ಮೇರೆಗೆ ನಿರ್ಣಯ ಕೈಗೊಂಡು ₹5 ದಂಡ ವಿಧಿಸಲಾಗಿದೆ' ಎಂದು ಹಮೀರ್ಪುರ ಪಂಚಾಯಿತಿ ಅಧ್ಯಕ್ಷ ಹರೀಶ್ ಶರ್ಮಾ ತಿಳಿಸಿದ್ದಾರೆ.
ಹರೀಶ್ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ 15ನೇ ಹಣಕಾಸು ಆಯೋಗದ ಬಜೆಟ್ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಿಡಬ್ಲ್ಯುಡಿ ಅಧಿಕಾರಿ ದೇವರಾಜ್, 'ಸಭೆಯ ಬಗ್ಗೆ ನನಗೆ ಮಾಹಿತಿ ಇರಲಿಲ್ಲ' ಎಂದಿದ್ದಾರೆ.