ಅಹಮದಾಬಾದ್: 'ವೋಟ್ ಬ್ಯಾಂಕ್ ರಾಜಕಾರಣದಿಂದ ಈಗಲೂ ನಾವು ಮೀಸಲಾತಿಯನ್ನು ರದ್ದು ಪಡಿಸಲು ಸಾಧ್ಯವಾಗಿಲ್ಲ. ಮೀಸಲಾತಿ ಎಂಬುದು ತಲೆನೋವಾಗಿದೆ' ಎಂದು ಗುಜರಾತ್ನ ಬಿಜೆಪಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನೌಕಾಬೆನ್ ಪ್ರಜಾಪತಿ ಹೇಳಿಕೆ ನೀಡಿದ್ದಾರೆ.
ಭಾನುವಾರ ಗಣರಾಜ್ಯೋತ್ಸವದ ಅಂಗವಾಗಿ ಬನಾಸ್ಕಾಂತಾ ಜಿಲ್ಲೆಯ ಬಾಬರ್ ಪಾಲಿಕೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಈ ರೀತಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆ ಹರಿದಾಡಿದ್ದು, ತೀವ್ರ ಟೀಕೆ ವ್ಯಕ್ತವಾಗಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ನಾಯಕರು 'ಬಿಜೆಪಿ ಮೀಸಲಾತಿ ವಿರೋಧಿ' ಎಂದು ಟೀಕಿಸಿವೆ.
'ಬಿಜೆಪಿ ಹಾಗೂ ಆರ್ಎಸ್ಎಸ್ ಮೀಸಲಾತಿ ತೆಗೆದು ಹಾಕಲು ಮೊದಲಿನಿಂದಲೂ ಪ್ರಯತ್ನಿಸುತ್ತಿವೆ. ಸಂವಿಧಾನದ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿ ನೀಡಿರುವುದು ಬಿಜೆಪಿ ಪಾಲಿಗೆ ತಲೆನೋವಾಗಿದೆ' ಎಂದು ಕಾಂಗ್ರೆಸ್ ವಕ್ತಾರ ಹಿರೇನ್ ಬಂಕಾರ್ ತಿಳಿಸಿದ್ದಾರೆ.
'ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ' ಎಂದು ಗುಜರಾತ್ ಎಎಪಿ ಘಟಕದ ಅಧ್ಯಕ್ಷ ಇಸುದಾನ್ ಗಧ್ವಿ ಹೇಳಿಕೆ ನೀಡಿದ್ದಾರೆ.