ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ರಾಜ್ ಬಳಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಿಂದಾಗಿ ಸಂಭ್ರಮದ ಬದಲು ಸೂತಕದ ಛಾಯೆ ಮೂಡಿದೆ. ಮೌನಿ ಅಮವಾಸ್ಯೆಯ ಸಂದರ್ಭದಲ್ಲಿ ಪವಿತ್ರ ಸ್ನಾನಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ನುಗ್ಗಿದ ಪರಿಣಾಮ ಉಂಟಾದ ಕಾಲ್ತುಳಿತದಲ್ಲಿ ಕೆಲವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
ಆದರೆ ದೇಶದ ಧಾರ್ಮಿಕ ಕೇಂದ್ರಗಳಲ್ಲಿ ಸಂಭವಿಸಿದ ಕಾಲ್ತುಳಿತ ಇದೇನೂ ಮೊದಲಲ್ಲ. ಕಳೆದ ಹಲವು ವರ್ಷಗಳಲ್ಲಿ ದೇಶದ ಹಲವು ದೇಗುಲ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಕಾಲ್ತುಳಿತ ಪ್ರಕರಣಗಳು ನಡೆದ ಕುರಿತು ಆಗಾಗ್ಗ ವರದಿಯಾಗುತ್ತಲೇ ಇವೆ.
2024ರ ಜುಲೈ 2ರಂದು ಉತ್ತರ ಪ್ರದೇಶದ ಹಾಥರಸ್ನಲ್ಲಿ ನಡೆದ ಭೋಲೆ ಬಾಬಾ ಅವರ ಸತ್ಸಂಗದಲ್ಲಿ ಉಂಟಾದ ಕಾಲ್ತುಳಿತದಲ್ಲಿ 121 ಜನ ಜೀವ ಕಳೆದುಕೊಂಡಿದ್ದರು. ಇವರಲ್ಲಿ ಬಹುತೇಕರು ಮಹಿಳೆಯರೇ ಆಗಿದ್ದರು.
ಇದೇ ರೀತಿ ಮಹಾರಾಷ್ಟ್ರದ ಮಂದರಾದೇವಿ ದೇಗುಲದಲ್ಲಿ 2005ರಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 340 ಜನ ಮೃತಪಟ್ಟಿದ್ದರು. 2008ರಲ್ಲಿ ರಾಜಸ್ಥಾನದ ಚಾಮುಂಡ ದೇವಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 250 ಜನ ಮೃತಪಟ್ಟಿದ್ದರು. ಅದೇ ವರ್ಷ ಹಿಮಾಚಲ ಪ್ರದೇಶದ ನೈನಾ ದೇವಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 162 ಜನ ಮೃತಪಟ್ಟಿದ್ದರು.
ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಪ್ರಮುಖ ದುರಂತಗಳ ಪಟ್ಟಿ ಇಲ್ಲಿದೆ
2023ರ ಮಾರ್ಚ್ 31: ಇಂದೋರ್ ನಗರದಲ್ಲಿ ಆಯೋಜಿಸಲಾಗಿದ್ದ ರಾಮ ನವಮಿ ಕಾರ್ಯಕ್ರಮದಲ್ಲಿ ಜರುಗಿದ ಹವನ ಸಂದರ್ಭದಲ್ಲಿ ಬಾವಿ ಕುಸಿದ ಪರಿಣಾಮ 36 ಜನ ಮೃತಪಟ್ಟಿದ್ದರು.
2002ರ ಜ. 1: ಜಮ್ಮು ಮತ್ತು ಕಾಶ್ಮೀರದ ಮಾತಾ ವೈಷ್ಣೋದೇವಿ ದೇಗುದಲ್ಲಿ ಅತಿಯಾದ ಜನದಟ್ಟಣೆಯಿಂದ ಉಂಟಾದ ಕಾಲ್ತುಳಿತದಲ್ಲಿ 12 ಜನ ಮೃತಪಟ್ಟಿದ್ದರು.
2015ರ ಜುಲೈ 14: ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದ ಪುಷ್ಕರಮ್ ಹಬ್ಬದ ಸಂದರ್ಭದಲ್ಲಿ ಗೋದಾವರಿ ನದಿ ತೀರದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಪವಿತ್ರ ಸ್ನಾನಕ್ಕಾಗಿ ಸೇರಿದ್ದರು. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 27 ಯಾತ್ರಿಗಳು ಮೃತಪಟ್ಟಿದ್ದರು.
2014ರ ಅ. 3: ಪಟ್ನಾದ ಗಾಂಧಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ದಸರಾ ಕಾರ್ಯಕ್ರಮದಲ್ಲಿ ಉಂಟಾದ ಕಾಲ್ತುಳಿತದಲ್ಲಿ 32 ಜನ ಮೃತಪಟ್ಟಿದ್ದರು.
2013ರ ಅ. 13: ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯ ರತ್ನಘರ್ ದೇಗುಲದಲ್ಲಿ ಆಯೋಜನೆಗೊಂಡಿದ್ದ ನವರಾತ್ರಿ ಉತ್ಸವದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 115 ಜನ ಮೃತಪಟ್ಟಿದ್ದರು. ಭಕ್ತರು ದಾಟುತ್ತಿದ್ದ ಸೇತುವೆ ಕುಸಿಯುತ್ತಿದೆ ಎಂಬ ವದಂತಿಯು ಕಾಲ್ತುಳಿತಕ್ಕೆ ಕಾರಣವಾಗಿತ್ತು.
2012ರ ನ. 19: ಪಟ್ನಾ ಬಳಿಯ ಗಂಗಾ ನದಿಯ ತೀರದಲ್ಲಿ ಅದಾಲತ್ ಘಾಟ್ ಬಳಿ ಆಯೋಜನೆಗೊಂಡಿದ್ದ ಛಾಟ್ ಪೂಜಾ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿತ್ತು. ಇದರಲ್ಲಿ 20 ಜನ ಜೀವ ಕಳೆದುಕೊಂಡಿದ್ದರು..
2011ರ ನ. 8: ಹರಿದ್ವಾರದ ಹರ್ ಕಿ ಪೌರಿ ಘಾಟ್ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ 20 ಜನ ಮೃತಪಟ್ಟಿದ್ದರು.
2011ರ ಜ. 14: ಕೇರಳದ ಇಡುಕ್ಕಿ ಜಿಲ್ಲೆಯ ಪುಲಮೇದು ಬಳಿ ಸಾಕಷ್ಟು ಸಂಖ್ಯೆಯಲ್ಲಿ ತೆರಳುತ್ತಿದ್ದ ಭಕ್ತರಿಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಜನರು ದಿಕ್ಕಾಪಾಲಗಿ ಓಡಲು ಮುಂದಾದರು. ಈ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿತ್ತು. ಇದರಲ್ಲಿ ಕನಿಷ್ಠ 104 ಜನ ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮೃತಪಟ್ಟಿದ್ದರು.
2010ರ ಮಾರ್ಚ್ 4: ಉತ್ತರ ಪ್ರದೇಶದ ಪ್ರತಾಪಘಡ್ನ ರಾಮ ಜಾನಕಿ ದೇಗುಲದ ಸ್ವಯಂ ಘೋಷಿತ ದೇವಮಾನವ ಕೃಪಾಲ್ ಮಹಾರಾಜ ಅವರು ಉಚಿತವಾಗಿ ವಿತರಿಸುತ್ತಿದ್ದ ವಸ್ತ್ರ ಹಾಗೂ ಊಟ ಪಡೆಯುವ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 63 ಜನ ಮೃತಪಟ್ಟಿದ್ದರು.
2005ರ ಜ. 25: ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಂದರಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ಸಂದರ್ಭದಲ್ಲಿ ತೆಂಗಿನಕಾಯಿ ಒಡೆಯಲು ಜನರು ಮುಂದಾದ ಸಂದರ್ಭದಲ್ಲಿ ಹಲವರು ಕಾಲು ಜಾರಿ ನೆಲಕ್ಕೆ ಬಿದ್ದರು. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 340 ಯಾತ್ರಿಗಳು ಮೃತಪಟ್ಟಿದ್ದರು.
2003ರ ಆ. 27: ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆದ ಕುಂಭ ಮೇಳದಲ್ಲಿ ಪವಿತ್ರ ಸ್ನಾನಕ್ಕೆ ಉಂಟಾದ ನೂಕುನುಗ್ಗಲಿನಿಂದ 39 ಜನ ಪ್ರಾಣ ಕಳೆದುಕೊಂಡಿದ್ದರು.
2025ರ ಜ. 9: ವೈಕುಂಠ ದ್ವಾರ ಪ್ರವೇಶಕ್ಕಾಗಿ ತಿರುಪತಿಯಲ್ಲಿ ನೀಡಲಾಗುತ್ತಿದ್ದ ಟಿಕೆಟ್ ಪಡೆಯುವ ಸಂದರ್ಭದಲ್ಲಿ ಉಂಟಾಗಿದ್ದ ನೂಕುನುಗ್ಗಲಿನಲ್ಲಿ ಕಾಲ್ತುಳಿತ ಸಂಭವಿಸಿ 6 ಜನ ಮೃತಪಟ್ಟಿದ್ದರು.