ಅಹಮದಾಬಾದ್: ಅಹಿಂಸಾ ತತ್ವವನ್ನು ರಕ್ಷಿಸಲು ಕೆಲವೊಮ್ಮೆ ಹಿಂಸೆ 'ಅನಿವಾರ್ಯ' ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಹಿರಿಯ ನಾಯಕ ಭಯ್ಯಾಜಿ ಜೋಶಿ ಹೇಳಿದ್ದಾರೆ.
ಗುಜರಾತ್ ವಿಶ್ವವಿದ್ಯಾಲಯದ ಮೈದಾನದಲ್ಲಿ ಗುರುವಾರ ನಡೆದ 'ಹಿಂದೂ ಆಧ್ಯಾತ್ಮಿಕ ಸೇವಾ ಮೇಳ'ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
'ಹಿಂದೂಗಳು ತಮ್ಮ ಧರ್ಮವನ್ನು ರಕ್ಷಿಸಲು ಯಾವಾಗಲೂ ಬದ್ಧರಾಗಿದ್ದಾರೆ. ನಮ್ಮ 'ಧರ್ಮ'ವನ್ನು ರಕ್ಷಿಸಲು, ಇತರರು 'ಅಧರ್ಮ' ಎಂದು ಕರೆಯುವ ಕೆಲಸಗಳನ್ನೂ ನಮಗೆ ಮಾಡಬೇಕಾಗುತ್ತದೆ. ನಮ್ಮ ಪೂರ್ವಜರು ಅಂತಹದ್ದನ್ನು ಮಾಡಿದ್ದಾರೆ' ಎಂದರು.
ಮಹಾಭಾರತ ಯುದ್ಧವನ್ನು ಉಲ್ಲೇಖಿಸಿದ ಅವರು, ಅಧರ್ಮವನ್ನು ತೊಡೆದುಹಾಕಲಿಕ್ಕಾಗಿ ಪಾಂಡವರು ಯುದ್ಧದ ವೇಳೆ ಪಾಲಿಸಬೇಕಾದ ನಿಯಮಗಳನ್ನು ಬದಿಗಿಟ್ಟರು ಎಂದು ಹೇಳಿದರು.
'ಅಹಿಂಸೆಯ ಕಲ್ಪನೆ ಹಿಂದೂ ಧರ್ಮದಲ್ಲಿ ಮಿಳಿತಗೊಂಡಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಕೆಲವೊಮ್ಮೆ ಅಹಿಂಸಾ ತತ್ವವನ್ನು ಕಾಪಾಡಲು ನಾವು ಹಿಂಸೆಯನ್ನು ಆಶ್ರಯಿಸಬೇಕಾಗುತ್ತದೆ. ಇಲ್ಲದಿದ್ದರೆ, ಅಹಿಂಸಾ ತತ್ವಕ್ಕೆ ಉಳಿಗಾಲ ಇಲ್ಲ. ಪೂರ್ವಜರು ನಮಗೆ ಅಂತಹ ಸಂದೇಶ ನೀಡಿದ್ದಾರೆ' ಎಂದು ಪ್ರತಿಪಾದಿಸಿದರು.
'ಎಲ್ಲರನ್ನೂ ತನ್ನ ಜತೆ ಕೊಂಡೊಯ್ಯಬಲ್ಲ ಸಾಮರ್ಥ್ಯವಿರುವವರಿಗೆ ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ. ಆದ್ದರಿಂದ ಭಾರತದ ಜನರು ಎಲ್ಲರನ್ನೂ ಶಾಂತಿಯ ಹಾದಿಯಲ್ಲಿ ಮುನ್ನಡೆಸಬೇಕು. ಒಂದು ಧರ್ಮವು ಇತರರಿಗೆ ಅವರ ನಂಬಿಕೆಗಳನ್ನು ಅನುಸರಿಸಲು ಅವಕಾಶ ನೀಡದಿದ್ದರೆ ಅಲ್ಲಿ ಶಾಂತಿ ಇರುವುದಿಲ್ಲ' ಎಂದು ತಿಳಿಸಿದರು.
'ಚರ್ಚ್ ಅಥವಾ ಮಿಷನರಿಗಳಂತಹ ಕೆಲವು ಸಂಸ್ಥೆಗಳು ಮಾತ್ರ ಜನರ ಸೇವೆಯಲ್ಲಿ ತೊಡಗಿಕೊಂಡಿವೆ ಎಂಬ ತಪ್ಪು ಕಲ್ಪನೆ ಎಲ್ಲ ಕಡೆ ಹರಡಿಕೊಂಡಿದೆ. ನಮ್ಮ ದೇವಾಲಯಗಳು ಅಥವಾ ಗುರುದ್ವಾರಗಳಲ್ಲಿ ಪ್ರತಿದಿನ ಸುಮಾರು 1 ಕೋಟಿ ಮಂದಿಗೆ ಆಹಾರ ವಿತರಿಸಿದ ಪ್ರಾಚೀನ ಸಂಪ್ರದಾಯವನ್ನು ನಾವು ಹೊಂದಿದ್ದೇವೆ. ಹಿಂದೂ ಧಾರ್ಮಿಕ ಸಂಘಟನೆಗಳು ಆಚರಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಶಾಲೆಗಳು, ಗುರುಕುಲಗಳು ಮತ್ತು ಆಸ್ಪತ್ರೆಗಳನ್ನು ನಡೆಸಿಕೊಂಡು ಹೋಗುತ್ತಿವೆ' ಎಂದರು.