ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ಗೆ ಚಾಕುವಿನಿಂದ ಇರಿದಿರುವ ಕೃತ್ಯದ ಹಿಂದೆ ಭೂಗತ ಪಾತಕಿಗಳ ನಂಟು ಇಲ್ಲ ಎಂದು ಮಹಾರಾಷ್ಟ್ರದ ಗೃಹ ಸಚಿವ ಯೋಗೇಶ್ ಕದಂ ಶನಿವಾರ ಹೇಳಿದ್ದಾರೆ.
'ಆರೋಪಿಯ ಕೃತ್ಯದ ಹಿಂದಿನ ಉದ್ದೇಶ ದರೋಡೆ ಮಾಡುವುದಾಗಿದೆ ಮತ್ತು ಚಾಕು ಇರಿತದಲ್ಲಿ ಯಾವುದೇ ಭೂಗತ ಪಾತಕಿಗಳ ಗುಂಪು ಭಾಗಿಯಾಗಿಲ್ಲ. ಈ ಅಂಶಗಳು ತನಿಖೆಯಲ್ಲಿ ಕಂಡುಬಂದಿವೆ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಸುಕಿನಲ್ಲಿ ಸೈಫ್ಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಪೊಲೀಸರ 30ಕ್ಕೂ ಹೆಚ್ಚು ತಂಡಗಳು ತೀವ್ರ ಶೋಧ ನಡೆಸುತ್ತಿವೆ.
'ಪ್ರಾಥಮಿಕ ತನಿಖೆಯ ಪ್ರಕಾರ, ದಾಳಿಕೋರನು ಯಾವುದೇ ಕ್ರಿಮಿನಲ್ ಗ್ಯಾಂಗ್ ಜತೆ ಸಂಪರ್ಕ ಹೊಂದಿರುವುದು ಕಂಡುಬಂದಿಲ್ಲ. ಬಹುಶಃ ಆತನಿಗೆ ತಾನು ಯಾರ ಮನೆಗೆ ನುಗ್ಗಿದ್ದೇನೆ ಎನ್ನುವ ಅರಿವು ಇರಲಿಕ್ಕಿಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು-ಮೂರು ದಿನಗಳಲ್ಲಿ ಸೈಫ್ ಮನೆಗೆ:
ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈಫ್ ಚೇತರಿಸಿಕೊಳ್ಳುತ್ತಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಶನಿವಾರ ತಿಳಿಸಿದ್ದಾರೆ.
'ಸೈಫ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಅವರ ಬೆನ್ನುಮೂಳೆಯಲ್ಲಿ ಸಿಲುಕಿದ್ದ 2.5 ಇಂಚಿನ ಚಾಕುವಿನ ತುಂಡನ್ನು ಯಶಸ್ವಿಯಾಗಿ ತೆಗೆಯಲಾಯಿತು. ಬೆನ್ನುಮೂಳೆಯಲ್ಲಿ ಕಂಡುಬಂದಿದ್ದ ದ್ರವ ಸೋರಿಕೆಯನ್ನು ಸರಿಪಡಿಸಲಾಗಿದೆ. ಗಾಯಗಳು ವಾಸಿಯಾಗುತ್ತಿವೆ. ಅವರಿಗೆ ನರಗಳಲ್ಲೂ ಯಾವುದೇ ತೊಂದರೆ ಇಲ್ಲ. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಅವರನ್ನು ತೀವ್ರ ನಿಗಾ ಘಟಕದಿಂದ ವಿಶೇಷ ಕೊಠಡಿಗೆ ಸ್ಥಳಾಂತರಿಸಲಾಗಿದೆ' ಎಂದು ಲೀಲಾವತಿ ಆಸ್ಪತ್ರೆಯೆ ವೈದ್ಯ ಡಾ. ನಿತಿನ್ ಡಾಂಗೆ ಮಾಹಿತಿ ನೀಡಿದರು.