ಪಟ್ನಾ: ಗಣರಾಜ್ಯೋತ್ಸವ ಅಂಗವಾಗಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ರಾಜಭವನದಲ್ಲಿ ಭಾನುವಾರ ಏರ್ಪಡಿಸಿದ್ದ, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೈರಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಿತೀಶ್ ಕುಮಾರ್ ಅವರು ರಾಜ್ಯಪಾಲ ಆರಿಫ್ ಅವರೊಂದಿಗೆ ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಂಡಿದ್ದರು.
ಆದರೆ, ರಾಜಭವನದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿರಲಿಲ್ಲ.
ರಾಜ್ಯಪಾಲರ ಔತಣಕೂಟದಲ್ಲಿ ಭಾಗವಹಿಸದೆ ಇರಲು ಜೆಡಿಯು ವರಿಷ್ಠರ 'ಅಸಮರ್ಥತೆಯೇ' ಪ್ರಮುಖ ಕಾರಣ ಎಂದು ವಿರೋಧ ಪಕ್ಷಗಳ ನಾಯಕರು ವಾಗ್ದಾಳಿ ನಡೆಸಿದ್ದಾರೆ.
'ಗಣರಾಜ್ಯೋತ್ಸವದ ಪರೇಡ್ ಬಳಿಕ ನಿತೀಶ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ ಅವರು ಔತಣಕೂಟದಲ್ಲಿ ಭಾಗವಹಿಸಲಿಲ್ಲ' ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದಿನಿಂದ (ಸೋಮವಾರ) ಆರಂಭವಾಗಬೇಕಿದ್ದ ನಿತೀಶ್ ಕುಮಾರ್ ನೇತೃತ್ವದ 'ಪ್ರಗತಿ ಯಾತ್ರೆ'ಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಸಂಪುಟ ಸಚಿವಾಲಯ ಮಾಹಿತಿ ನೀಡಿದೆ.
ತಮಿಳುನಾಡು ರಾಜ್ಯಪಾಲರ ಔತಣಕೂಟ ಬಹಿಷ್ಕರಿಸಿದ ಸ್ಟಾಲಿನ್
ಗಣರಾಜ್ಯೋತ್ಸವ ಅಂಗವಾಗಿ ರಾಜ್ಯಪಾಲ ಆರ್.ಎನ್.ರವಿ ಅವರು ರಾಜಭವನದಲ್ಲಿ ಭಾನುವಾರ ಏರ್ಪಡಿಸಿದ್ದ, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪಾಲ್ಗೊಳ್ಳಲಿಲ್ಲ.
ಹಲವು ವಿಚಾರಗಳಿಗೆ ಸಂಬಂಧಿಸಿ ರಾಜಭವನ ಮತ್ತು ಡಿಎಂಕೆ ನೇತೃತ್ವದ ಸರ್ಕಾರದ ನಡುವಿನ ಜಟಾಪಟಿಯೇ ಇಂತಹ ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ವಿರೋಧ ಪಕ್ಷಗಳಾದ ಎಐಎಡಿಎಂಕೆ, ಬಿಜೆಪಿ, ಡಿಎಂಡಿಕೆ ಹಾಗೂ ಪುದಿಯ ತಮಿಳಗಂ ಪಕ್ಷಗಳ ನಾಯಕರು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.