ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲಿನ ಚಾಕು ಇರಿತ ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿ ನನ್ನನ್ನು ಬಂಧಿಸುವ ಮೂಲಕ ಮುಂಬೈ ಪೊಲೀಸರು ನನ್ನ ಜೀವನವನ್ನು ಹಾಳು ಮಾಡಿದ್ದಾರೆ ಎಂದು 31 ವರ್ಷದ ಆಕಾಶ್ ಕೈಲಾಶ್ ಕನೋಜಿಯಾ ಅಳಲು ತೋಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪೊಲೀಸರ ಕ್ರಮದಿಂದ ನನ್ನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಜೀವನೋಪಾಯಕ್ಕಿದ್ದ ಕೆಲಸವನ್ನು ಕಳೆದುಕೊಂಡಿದ್ದೇನೆ. ನಮ್ಮ ಕುಟುಂಬಸ್ಥರು ಬೇಸರಗೊಂಡಿದ್ದಾರೆ. ನಾನು ಮದುವೆಯಾಗಬೇಕಿದ್ದ ವಧುವಿನ ಕಡೆಯವರಿಂದ ಅವಮಾನ ಎದುರಿಸುವಂತಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಮಾಧ್ಯಮಗಳು ನಾನೇ ಆರೋಪಿ ಎಂಬಂತೆ ಬಿಂಬಿಸಿ ನನ್ನ ಚಿತ್ರಗಳು ಮತ್ತು ಸುದ್ದಿಯನ್ನು ಬಿತ್ತರಿಸಿದ್ದರಿಂದ ನನ್ನ ಕುಟುಂಬವು ಆಘಾತಕ್ಕೊಳಗಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ವ್ಯಕ್ತಿಯನ್ನು ಸರಿಯಾಗಿ ಗಮನಿಸದೆ ಪೊಲೀಸರು ನನ್ನನ್ನು ಬಂಧಿಸಿದ್ದರು. ಮುಂಬೈ ಪೊಲೀಸರ ಒಂದು ತಪ್ಪು ನನ್ನ ಜೀವನವನ್ನು ಹಾಳುಮಾಡಿದೆ' ಎಂದು ಕನೋಜಿಯಾ 'ಪಿಟಿಐ'ಗೆ ತಿಳಿಸಿದ್ದಾರೆ.
'ನಾನು ಮದುವೆಯಾಗಬೇಕಿದ್ದ ವಧುವನ್ನು ಭೇಟಿಯಾಗಲು ಹೋಗುತ್ತಿದ್ದ ವೇಳೆ ಪೊಲೀಸರು ನನ್ನನ್ನು ಬಂಧಿಸಿದ್ದರು. ಜತೆಗೆ ತೀವ್ರವಾಗಿ ಹಲ್ಲೆಯನ್ನೂ ನಡೆಸಿದ್ದರು' ಎಂದು ಕನೋಜಿಯಾ ಆರೋಪಿಸಿದ್ದಾರೆ.
ಜನವರಿ 16ರಂದು ಮುಂಬೈನ ಬಾಂದ್ರಾದಲ್ಲಿರುವ 'ಸದ್ಗುರು ಶರಣ್' ಅಪಾರ್ಟ್ಮೆಂಟ್ನ 12ನೇ ಮಹಡಿಯಲ್ಲಿರುವ ನಿವಾಸದಲ್ಲಿ 54 ವರ್ಷದ ಸೈಫ್ ಅಲಿ ಖಾನ್ ದುಷ್ಕರ್ಮಿಯೊಬ್ಬರಿಂದ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಕರಣ ಸಂಬಂಧ ಜನವರಿ 18ರಂದು ಗುಪ್ತಚರ ಮಾಹಿತಿ ಆಧರಿಸಿ ರೈಲ್ವೆ ಸುರಕ್ಷತಾ ಪಡೆ (ಆರ್ಪಿಎಫ್) ಅಧಿಕಾರಿಗಳು, ಶಂಕಿತ ಆರೋಪಿಯಾಗಿ ಆಕಾಶ್ ಕೈಲಾಶ್ ಕನೋಜಿಯಾ ಅವರನ್ನು ಛತ್ತೀಸಗಢದ ದುರ್ಗ್ನಲ್ಲಿ ರೈಲಿನಲ್ಲಿ ವಶಕ್ಕೆ ಪಡೆದು ಮುಂಬೈ ಪೊಲೀಸರಿಗೆ ಒಪ್ಪಿಸಿದ್ದರು.
ಜನವರಿ 19ರಂದು ಬಾಂಗ್ಲಾ ಮೂಲದ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ಉರುಫ್ ವಿಜಯ್ ದಾಸ್ ಖಾನ್ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಈತನೇ ಪ್ರಕರಣದ ನಿಜವಾದ ಆರೋಪಿ ಎಂದು ಖಚಿತವಾದ ಬಳಿಕ ಆಕಾಶ್ ಕನೋಜಿಯಾನನ್ನು ಪೊಲೀಸರ ಬಿಡುಗಡೆ ಮಾಡಿದ್ದರು.