ಮುಂಬೈ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಕ್ಸಲಿಸಂ ಬಹಳಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾನುವಾರ ಹೇಳಿದರು.
ಶಿರಡಿಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಬಿಜೆಪಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಗಡ್ಚಿರೋಲಿಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಯುವಕರು ನಕ್ಸಲಿಸಂ ತೊರೆದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ.ಮುಂದಿನ ಐದು ವರ್ಷಗಳಲ್ಲಿ ಗಡ್ಚಿರೋಲಿ ಮಹಾರಾಷ್ಟ್ರದ ಅತ್ಯಧಿಕ ಆದಾಯ ತರುವ ಜಿಲ್ಲೆಯಾಗಲಿದೆ ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಯಶಸ್ಸನ್ನು ಕಾರ್ಯಕರ್ತರು ಅರ್ಥಪೂರ್ಣವಾಗಿ ಸಾಮಾಜಿಕ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದರು. ಈ ಜಯವು ಉತ್ತಮ ಆಡಳಿತ ಸ್ಥಾಪನೆಗೆ ಕಾರಣವಾಗಬೇಕು ಎಂದರು.
ಗಡ್ಚಿರೋಲಿ ಜಿಲ್ಲೆಯ ಕೆಲವು ಪ್ರದೇಶಗಳಿಗೆ ಭೇಟಿ ನೀಡುವುದು ಕಷ್ಟವಾಗಿತ್ತು. ನಕ್ಸಲಿಸಂ ತೊರೆದಿರುವ ಯುವಕರು ಚಾಲಕ, ಫಿಟ್ಟರ್ ಸೇರಿದಂತೆ ಮುಂತಾದ ಉದ್ಯೋಗಗಳನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಜಿಲ್ಲೆಯಲ್ಲಿ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳು ಸ್ಥಾಪನೆಯಾಗಿವೆ. ವಸ್ತ್ರ ತಯಾರಿಕೆ ಕಾರ್ಖಾನೆಗಳು ಆರಂಭವಾಗಿದ್ದು ಹತ್ತು ಸಾವಿರ ಆದಿವಾಸಿ ಯುವಕರಿಗೆ ಉದ್ಯೋಗ ಸೃಷ್ಟಿಯಾಗಿದೆ ಎಂದು ಗಡ್ಕರಿ ಹೇಳಿದರು.