ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಬಂಧಿಸಿರುವ ವ್ಯಕ್ತಿಯನ್ನು ಜನವರಿ 24ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿ ಮುಂಬೈನ ನ್ಯಾಯಾಲಯವು ಭಾನುವಾರ ಆದೇಶಿಸಿದೆ. ಹಲ್ಲೆ ನಡೆಸಿದ ಆರೋಪ ಹೊತ್ತವನು ಬಾಂಗ್ಲಾದೇಶದ ಪ್ರಜೆ.
ಹಲ್ಲೆ ನಡೆಸಿದ್ದಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಮಾಡಬೇಕಿದೆ. ಈ ಪ್ರಕರಣದ ಹಿಂದೆ ಅಂತರರಾಷ್ಟ್ರೀಯ ಪಿತೂರಿ ಇದೆಯೇ ಎಂಬುದನ್ನು ಕೂಡ ಪತ್ತೆ ಮಾಡಬೇಕಿದೆ ಎಂದು ಪೊಲೀಸರು ಕೋರ್ಟ್ಗೆ ವಿವರಿಸಿದರು.
ಅಂತರರಾಷ್ಟ್ರೀಯ ಪಿತೂರಿಯ ವಿಚಾರವಾಗಿ ಪ್ರಾಸಿಕ್ಯೂಷನ್ ಮಂಡಿಸಿರುವ ವಾದವನ್ನು 'ಸಾಧ್ಯವೇ ಇಲ್ಲದ ಸಂಗತಿ ಎಂದು ಹೇಳಲಾಗದು' ಎಂದು ನ್ಯಾಯಾಲಯ ದಾಖಲೆಗಳನ್ನು ಪರಿಶೀಲಿಸಿದ ನಂತರ ಹೇಳಿದೆ.
ಹಲ್ಲೆ ನಡೆಸಿದ ಆರೋಪಿಯ ಹೆಸರು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್, ಈತ ಬಾಂಗ್ಲಾದೇಶದ ಪ್ರಜೆ ಎಂದು ಪೊಲೀಸರು ಮಾಧ್ಯಮ ಪ್ರತಿನಿಧಿಗಳಿಗೆ ಭಾನುವಾರ ತಿಳಿಸಿದ್ದರು. ಈತ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ತನ್ನ ಹೆಸರನ್ನು ಬಿಜಯ್ ದಾಸ್ ಎಂದು ಬದಲಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಸೈಫ್ ಅವರ ನಿವಾಸಕ್ಕೆ ಶೆಹಜಾದ್ ಕಳ್ಳತನದ ಉದ್ದೇಶದಿಂದ ಜನವರಿ 16ರ ನಸುಕಿನಲ್ಲಿ ಪ್ರವೇಶಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸೈಫ್ ಅವರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಯು, ಅವರನ್ನು ಹಲವು ಬಾರಿ ಇರಿದಿದ್ದ. ಈತನನ್ನು ಪಕ್ಕದ ಠಾಣೆಯಲ್ಲಿ ಬಂಧಿಸಲಾಗಿದೆ.
ಗುತ್ತಿಗೆದಾರ ನೀಡಿದ್ದ ಸುಳಿವು
ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಪತ್ತೆ ಮಾಡಲು ಪೊಲೀ ಸರಿಗೆ ನೆರವಾಗಿದ್ದು ಕಾರ್ಮಿಕರ ಗುತ್ತಿಗೆದಾರರೊಬ್ಬರು ನೀಡಿದ ಮಾಹಿತಿ. ಆರೋಪಿಯನ್ನು ಪತ್ತೆ ಮಾಡಲು ಪೊಲೀಸರು ಹಲವು ತಂಡಗಳನ್ನು ರಚಿಸಿದ್ದರು. ಆರೋಪಿಯು ದಾದರ್ ರೈಲು ನಿಲ್ದಾಣದ ಹೊರಗಡೆ ಮೂರು ಬಾರಿ ಕಾಣಿಸಿಕೊಂಡಿದ್ದ. ನೂರಾರು ಸಿ.ಸಿ.ಟಿ.ವಿ ಕ್ಯಾಮೆರಾ. ದೃಶ್ಯಾವಳಿಗಳನ್ನು ಪರಿಶೀಲಿಸಿದ್ದ ಪೊಲೀಸರಿಗೆ ಈತ ಕಾರ್ಮಿಕರ ಗುತ್ತಿಗೆದಾರರೊಬ್ಬರನ್ನು ಸಂಪರ್ಕಿಸಿದ್ದು ಗೊತ್ತಾಯಿತು. ದಾಳಿ ನಡೆಸಿದ ವ್ಯಕ್ತಿಯ ಬಗ್ಗೆ ಆ ಗುತ್ತಿಗೆದಾರ ಎಲ್ಲ ಮಾಹಿತಿ ಒದಗಿಸಿದರು. ಆ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನು ಠಾಣೆಯಲ್ಲಿ ಪತ್ತೆ ಮಾಡಿದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ತಾನು ಹಲ್ಲೆ ಮಾಡಿದ್ದು ಬಾಲಿವುಡ್ನ ಖ್ಯಾತ ನಟನೊಬ್ಬನ ಮೇಲೆ ಎಂಬುದು ದಾಳಿಕೋರನಿಗೆ ಗೊತ್ತೇ ಇರಲಿಲ್ಲ. ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ವರದಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್ಗಳನ್ನು ಗಮನಿಸಿದ ನಂತರವೇ ಆತನಿಗೆ ತಾನು ಖ್ಯಾತ ನಟನ ಮೇಲೆ ಹಲ್ಲೆ ಮಾಡಿರುವುದು ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಸೈಫ್ ಅವರ ಮೇಲೆ ಹಲ್ಲೆ ನಡೆಸಿದ ನಂತರ ಆರೋಪಿಯು ಬೆಳಿಗ್ಗೆ 7 ಗಂಟೆಯವರೆಗೆ ಬಾಂದ್ರಾ ಪಶ್ಚಿಮದ ಪಟವರ್ಧನ ಗಾರ್ಡನ್ ಬಸ್ ನಿಲ್ದಾಣದಲ್ಲಿ ಮಲಗಿದ್ದ. ನಂತರ ರೈಲಿನ ಮೂಲಕ ವರ್ಲಿ ತಲುಪಿದ್ದ. ಸೈಫ್ ನಿವಾಸ ಇರುವ ಕಟ್ಟಡದ ಏಳು-ಎಂಟನೆಯ ಮಹಡಿಯವರೆಗೆ ಮೆಟ್ಟಿಲುಗಳನ್ನು ಬಳಸಿ ತಲುಪಿದ್ದ ಹಲ್ಲೆಕೋರ ಪೈಪ್ ಬಳಸಿ 12ನೆಯ ಮಹಡಿ ತಲುಪಿದ್ದ. ಸ್ನಾನದ ಕೋಣೆಯ ಕಿಟಕಿ ಮುರಿದು ಸೈಫ್ ಮನೆಗೆ ನುಗ್ಗಿದ್ದ. ಈತ ಕಳೆದ ಐದು ತಿಂಗಳುಗಳಿಂದ ಮುಂಬೈನಲ್ಲಿ ನೆಲೆ ಕಂಡುಕೊಂಡಿದ್ದ ಅಲ್ಲಿ-ಇಲ್ಲಿ ಕೆಲವು ಸಣ್ಣ ಕೆಲಸಗಳನ್ನು ಮಾಡಿಕೊಂಡಿದ್ದ ಎಂದು ಅವರು ತಿಳಿಸಿದ್ದಾರೆ.