ಗುವಾಹಟಿ: ಅಸ್ಸಾಂನ ನಗಾಂವ್ ಜಿಲ್ಲೆಯಲ್ಲಿ ಆನೆಗಳಿಗೆಂದೇ ನಿರ್ದಿಷ್ಟ ವಿಧದ ಹುಲ್ಲನ್ನು ಬೆಳೆಯುವ ಮೂಲಕ ಮಾನವ-ಆನೆ ಸಂಘರ್ಷ ತಡೆಗೆ ವಿನೂತನ ದಾರಿ ಕಂಡುಕೊಂಡಿರುವುದನ್ನು 'ಮನದ ಮಾತು' ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದರು.
'ಆನೆಗಳ ಸ್ನೇಹಿತರು' (ಹಾಥಿ ಬಂಧು) ಹೆಸರಿನ ಗುಂಪಿನ ವಿನೂತನ ಕಾರ್ಯದ ಕುರಿತ ಆಡಿಯೊ ಕ್ಲಿಪ್ ಅನ್ನು 'ಎಕ್ಸ್'ನಲ್ಲಿ ಹಂಚಿಕೊಂಡಿರುವ ಅವರು, ನಗಾಂವ್ ಜಿಲ್ಲೆಯ ಪ್ರಯತ್ನವು ಪ್ರತಿಯೊಬ್ಬರನ್ನೂ ಪ್ರೇರೇಪಿಸುವ ಶಕ್ತಿ ಹೊಂದಿದೆ ಎಂದು ಹೇಳಿದ್ದಾರೆ.
'ನಗಾಂವ್ನಲ್ಲಿ ನಿರಂತರವಾಗಿ ಮಾನವ-ಆನೆ ಸಂಘರ್ಷ ನಡೆಯುತ್ತಿತ್ತು. ಆಹಾರ ಅರಸಿ ಗ್ರಾಮಗಳಿಗೆ ಬರುತ್ತಿದ್ದ ಆನೆಗಳು ಬೆಳೆಗಳನ್ನು ನಾಶಪಡಿಸುತ್ತಿದ್ದವು. ಇದರಿಂದ ಕಂಗಾಲಾದ ಗ್ರಾಮಸ್ಥರು 'ಹಾಥಿ ಬಂಧು' ಹೆಸರಿನಲ್ಲಿ ಗುಂಪು ಕಟ್ಟಿಕೊಂಡು ಆನೆಗಳು ಬೆಳೆ ನಾಶಪಡಿಸದಿರಲು ವಿನೂತನ ಹೆಜ್ಜೆ ಇಟ್ಟರು. ಗ್ರಾಮಸ್ಥರೆಲ್ಲ ಒಗ್ಗೂಡಿ 264ಎಕರೆ ಬರಡು ಭೂಮಿಯಲ್ಲಿ ಮೇವಿನ ಹುಲ್ಲು (ನೇಪಿಯರ್ ಹುಲ್ಲು) ಬೆಳೆಯಲು ಆರಂಭಿಸಿದರು. ಪರಿಣಾಮವಾಗಿ ಕೃಷಿ ಭೂಮಿಗೆ ಆನೆಗಳು ಲಗ್ಗೆ ಇಡುವುದು ಕಡಿಮೆಯಾಗಿದೆ. ಇದರಿಂದ ಸಾವಿರಾರು ರೈತರು ನಿಟ್ಟುಸಿರುವ ಬಿಡುವಂತಾಗಿದೆ' ಎಂದು ತಿಳಿಸಿದ್ದಾರೆ.