ಮೀರಠ್: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹುತಾತ್ಮ ದಿನದಂದೇ, ಅವರನ್ನು ಕೊಲೆ ಮಾಡಿದ ನ್ಯಾಥೂರಾಮ್ ಗೋಡ್ಸೆಯನ್ನು ಅಖಿಲ ಭಾರತ ಹಿಂದೂ ಮಹಾಸಭಾ ಗುರುವಾರ ಗೌರವಿಸಿದೆ.
1948ರ ಜನವರಿ 30ರಂದು ಮಹಾತ್ಮ ಗಾಂಧಿಯನ್ನು ಗೋಡ್ಸೆ ಕೊಲೆ ಮಾಡಿದ್ದ.
ಪ್ರಧಾನಿ ಮೋದಿ, ರಾಹುಲ್ ಗಾಂಧಿ, ಖರ್ಗೆಯಿಂದ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ
'ಅಮರ ಹುತಾತ್ಮ ನ್ಯಾಥೂರಾಮ ಗೋಡ್ಸೆ ನಾನಾ ಅಪ್ಟೆ ಧಾಮ'ದಲ್ಲಿ ಸಭೆ ಸೇರಿದ ಹಿಂದೂ ಮಹಾಸಭಾ ಸದಸ್ಯರು, ಮಹಾತ್ಮ ಗಾಂಧಿ ಕೊಲೆ ಮಾಡಿದ್ದಕ್ಕೆ ಗೋಡ್ಸೆಯನ್ನು ಹೊಗಳಿದ್ದಾರೆ.
ಸ್ಥಳದಲ್ಲಿ ನಡೆದ ಹವನ, ಪೂಜೆ ಹಾಗೂ ಹನುಮಾನ್ ಚಾಲೀಸ ಪಠಣಕ್ಕೆ ಮಹಾಸಭಾದ ನಾಯಕ ಹಾಗೂ ನಾನಾ ಅಪ್ಟೆ ಧಾಮದ ಸಂಸ್ಥಾಪಕ ಪಂಡಿತ್ ಅಶೋಕ್ ಶರ್ಮಾ ನೇತೃತ್ವ ನೀಡಿದರು.
ಸಮಾರಂಭವು 'ಕರಮಚಂದ್ ಗಾಂಧಿಯವರ ಆತ್ಮವನ್ನು ತೆಗೆದುಹಾಕುವುದು' ಮತ್ತು ಭಾರತದಿಂದ 'ಗಾಂಧಿವಾದ'ವನ್ನು ಅನ್ನು ತೊಡೆದುಹಾಕುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.
ಅಲ್ಲದೆ ಮಹಾತ್ಮ ಗಾಂಧಿಯವರಿಗೆ ಇರುವ 'ರಾಷ್ಟ್ರ ಪಿತ' ಎನ್ನುವ ಬಿರುದನ್ನು ತೆಗೆದುಹಾಕಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಹಾತ್ಮ ಗಾಂಧಿ ಹತ್ಯೆಯಲ್ಲಿ ಭಾಗಿಯಾದ ನ್ಯಾಥೂರಾಮ ಗೋಡ್ಸೆ ಹಾಗೂ ನಾರಾಯಣ ನಾನಾ ಅಪ್ಟೆಯವರ ಕುಟುಂಬವನ್ನು ಸನ್ಮಾನಿಸುವುದಾಗಿ ಇದೇ ವೇಳೆ ಸಮಾರಂಭದಲ್ಲಿ ಘೋಷಿಸಲಾಯಿತು.
ಬೆಂಬಲಿಗರಿಗೆ ಸಿಹಿ ಹಂಚುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.
1948ರ ಜನವರಿ 30ರಂದು ಬಿರ್ಲಾ ಮಂದಿರದಿಂದ ಪ್ರಾರ್ಥನೆ ಮುಗಿಸಿ ಬರುತ್ತಿದ್ದ ಗಾಂಧಿಯವರನ್ನು
ಹಿಂದೂ ಮಹಾಸಭಾದ ಸದಸ್ಯನಾಗಿದ್ದ ಗೋಡ್ಸೆ ಗುಂಡಿಕ್ಕಿ ಕೊಲೆ ಮಾಡಿದ್ದ. 1949ರಲ್ಲಿ ಆತನನ್ನು ಅಂಬಾಲ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.