ನವದೆಹಲಿ: ಸಂತ್ರಸ್ತ ವ್ಯಕ್ತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದನ್ನು ಸಾಬೀತು ಮಾಡಲು, ದೇಹದ ಮೇಲೆ ಗಾಯಗಳು ಇರಲೇಬೇಕು ಎನ್ನಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ಇಂತಹ ಪ್ರಕರಣಗಳಲ್ಲಿ ಎಲ್ಲರೂ ಒಂದೇ ಬಗೆಯಲ್ಲಿ ಪ್ರತಿಕ್ರಿಯೆ ತೋರಿರುತ್ತಾರೆ ಎಂಬುದನ್ನು ನಿರೀಕ್ಷಿಸುವುದು ಸರಿಯಲ್ಲ, ವಾಸ್ತವವಾದುದೂ ಅಲ್ಲ' ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್. ಭಟ್ಟಿ ಅವರು ಇರುವ ವಿಭಾಗೀಯ ಪೀಠ ಹೇಳಿದೆ.
ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ಗಾಯಗಳು ಆಗಿರುತ್ತವೆ ಎಂಬುದು ಬಹಳ ವ್ಯಾಪಕವಾಗಿರುವ ನಂಬಿಕೆ ಮಾತ್ರ ಎಂದು ಪೀಠವು ವಿವರಿಸಿದೆ.
'ಗಾಯ, ಯಾತನೆಗೆ ಸಂತ್ರಸ್ತರು ಪ್ರತಿಕ್ರಿಯಿಸುವ ಬಗೆ ಭಿನ್ನವಾಗಿರುತ್ತದೆ. ಭೀತಿ, ಆಘಾತ, ಸಾಮಾಜಿಕ ಕಳಂಕ ಹೊತ್ತುಕೊಳ್ಳುವ ಭಯ, ಅಸಹಾಯಕತೆಯಂತಹ ಅಂಶಗಳು ಅವರು ಪ್ರತಿಕ್ರಿಯಿಸುವ ಬಗೆಯ ಮೇಲೆ ಪ್ರಭಾವ ಬೀರುತ್ತವೆ. ಲೈಂಗಿಕ ದೌರ್ಜನ್ಯದ ಜೊತೆ ಅಂಟಿಕೊಂಡಿರುವ ಕಳಂಕವು ಮಹಿಳೆಯರ ಪಾಲಿಗೆ ಅಡ್ಡಿಗಳನ್ನು ಸೃಷ್ಟಿಸುತ್ತದೆ, ಘಟನೆಯ ಬಗ್ಗೆ ಅವರು ಇತರರಿಗೆ ಮಾಹಿತಿ ನೀಡುವುದು ಕಷ್ಟವಾಗುವಂತೆ ಮಾಡುತ್ತದೆ' ಎಂದು ಪೀಠವು ಹೇಳಿದೆ.