ನವದೆಹಲಿ: ಶಕ್ತಿಶಾಲಿ ಕ್ಷಿಪಣಿಗಳು ಸೇರಿದಂತೆ ದೇಶದ ಭದ್ರತಾ ಪಡೆಗಳ ಸಾಮರ್ಥ್ಯ, ಶ್ರೀಮಂತ ಸಂಸ್ಕೃತಿ-ಕಲೆಗಳ ಪ್ರದರ್ಶನ, ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರಿಂದ ಹಿಡಿದು ಪ್ಯಾರಲಿಂಪಿಕ್ ಅಥ್ಲೀಟ್ಗಳವರೆಗೆ ವಿವಿಧ ಕ್ಷೇತ್ರಗಳ 10 ಸಾವಿರಕ್ಕೂ ಅಧಿಕ ವಿಶೇಷ ಅತಿಥಿಗಳು ರಾಷ್ಟ್ರ ರಾಜಧಾನಿಯ ಕರ್ತವ್ಯಪಥದಲ್ಲಿ ನಡೆದ 76ನೇ ಗಣ ರಾಜ್ಯೋತ್ಸವಕ್ಕೆ ಭಾನುವಾರ ಮೆರುಗು ನೀಡಿದವು.
ಹಲವು 'ಪ್ರಥಮ'ಗಳಿಗೂ ಸಾಕ್ಷಿಯಾದ ಈ ಬಾರಿಯ ಗಣರಾಜ್ಯೋತ್ಸವದಲ್ಲಿ, ದೇಶವು ಆರ್ಥಿಕ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿ, ಸಂವಿಧಾನದ ಮಹತ್ವ ಸಾರುವ ಸ್ತಬ್ಧಚಿತ್ರಗಳು ಕೂಡ ಇದ್ದವು.
ಬೆಳಗಾವಿಯ ಕೇಂದ್ರೀಯ ವಿದ್ಯಾಲಯ ಸೇರಿದಂತೆ ಮೂರು ಸರ್ಕಾರಿ ಶಾಲೆಗಳ ಬ್ಯಾಂಡ್ಗಳು ಇದೇ ಮೊದಲ ಬಾರಿಗೆ ಪಾಲ್ಗೊಂಡಿದ್ದು ವಿಶೇಷ. ಈ ಪೈಕಿ ಎರಡು ಬ್ಯಾಂಡ್ಗಳನ್ನು ಬಾಲಕಿಯರೇ ಮುನ್ನಡೆಸಿದ್ದು ಗಮನಾರ್ಹ.
'ಕರ್ತವ್ಯ ಪಥ'ದಲ್ಲಿ ನಡೆದ ಕಾರ್ಯಕ್ರಮಕ್ಕೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾರೋಟಿನಲ್ಲಿ ಆಗಮಿಸಿದರು. ಈ ಬಾರಿಯ ಅತಿಥಿ, ಇಂಡೊನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಅವರು ದೇಶದ ಸಾಂಸ್ಕೃತಿಕ ಶ್ರೀಮಂತಿಕೆ, ವೈವಿಧ್ಯವನ್ನು ಕಣ್ತುಂಬಿಕೊಂಡರು.
ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಕೇಂದ್ರ ಸಚಿವರು, ಸೇನಾಪಡೆಗಳ ಉನ್ನತ ಅಧಿಕಾರಿಗಳು, ವಿದೇಶಗಳ ರಾಜತಾಂತ್ರಿಕರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಆಗಸದಲ್ಲಿ ತ್ರಿವರ್ಣಗಳ ಹೊಗೆ ಹಬ್ಬಿಸಿ, ಅಬ್ಬರಿಸುತ್ತಾ ಹಾರಾಟ ನಡೆಸಿದ ಯುದ್ಧವಿಮಾನಗಳು, ಹೆಲಿಕಾಪ್ಟರ್ಗಳು ಕಾರ್ಯಕ್ರಮದ ಆಕರ್ಷಣೆಯಾಗಿದ್ದವು.
ವಿಶೇಷ ಅತಿಥಿಗಳು
ಜನರ ಪಾಲ್ಗೊಳ್ಳುವಿಕೆ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಈ ಬಾರಿ, ವಿವಿಧ ಕ್ಷೇತ್ರಗಳ ಜನರಿಗೆ ಆಹ್ವಾನ ನೀಡಲಾಗಿತ್ತು.
ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿರುವ ಗ್ರಾಮ ಪಂಚಾಯಿತಿಗಳ 300 ಸದಸ್ಯರನ್ನು ಆಹ್ವಾನಿಸಲಾಗಿತ್ತು. ಕೇಂದ್ರದ ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಈ ಕುರಿತ ಸ್ಪರ್ಧೆಗಳನ್ನು ಹಮ್ಮಿಕೊಂಡಿತ್ತು.
ಪ್ರಾಕೃತಿಕ ವಿಕೋಪಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವವರ ಪೈಕಿ 300 ಸಿಬ್ಬಂದಿ, ಜಲ ಸಂರಕ್ಷಣೆಗೆ ಹೋರಾಡುತ್ತಿರುವ 400 ಮಂದಿ, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ 200 ಪ್ರತಿನಿಧಿಗಳು, 'ಪಾನಿ ಸಮಿತಿ'ಗಳ 400 ಪ್ರತಿನಿಧಿಗಳು, 400 ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಸ್ವಸಹಾಯ ಗುಂಪುಗಳ 200 ಸದಸ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ 10 ಸಾವಿರಕ್ಕೂ ಹೆಚ್ಚು ಜನರು ಗಣರಾಜ್ಯೋತ್ಸವದ ಪಥಸಂಚಲನವನ್ನು ಕಣ್ತುಂಬಿಕೊಂಡರು.
ಈ ವಿಶೇಷ ಅತಿಥಿಗಳು, ಪಥಸಂಚಲನ ವೀಕ್ಷಿಸಿದ ನಂತರ ರಾಷ್ಟ್ರೀಯ ಯುದ್ಧ ಸ್ಮಾರಕ, ಪ್ರಧಾನ ಮಂತ್ರಿಗಳ ಸಂಗ್ರಹಾಲಯ ಹಾಗೂ ದೆಹಲಿಯಲ್ಲಿರುವ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದರು.
ಭದ್ರತಾಪಡೆಗಳ ಶಕ್ತಿ ಪ್ರದರ್ಶನ
'ರಕ್ಷಾ ಕವಚ' ವಿಷಯದಡಿ ನಿರ್ಮಿಸಿದ್ದ ಸ್ತಬ್ಧಚಿತ್ರ, ಸೇನಾಪಡೆಗಳ ಸಾಮರ್ಥ್ಯ ತೆರೆದಿಟ್ಟಿತು. ದೇಶೀಯವಾಗಿಯೇ ತಯಾರಿಸಲಾಗಿರುವ 'ಪ್ರಳಯ' ಕ್ಷಿಪಣಿಯನ್ನು ಪಥಸಂಚಲನದಲ್ಲಿ ಪ್ರದರ್ಶಿಸಲಾಯಿತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್ಡಿಒ) ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ದು, ನಿರ್ದೇಶಿತ ಗುರಿ ನಾಶ ಮಾಡುವ ಸಾಮರ್ಥ್ಯ ಹೊಂದಿದೆ.
ನೆಲದಿಂದ ನೆಲಕ್ಕೆ ಚಿಮ್ಮಬಲ್ಲ ಈ ಕ್ಷಿಪಣಿಯು 500ರಿಂದ1,500 ಕೆ.ಜಿ ತೂಕದಷ್ಟು ಶಸ್ರ್ರಾಸ್ತ್ರ ಹೊರುವ ಸಾಮರ್ಥ್ಯ ಹೊಂದಿದ್ದು, 150ರಿಂದ 500 ಕಿ.ಮೀ. ದೂರ ಸಾಗಬಲ್ಲದು.
ಉಪಗ್ರಹ ಆಧಾರಿತ ಕಣ್ಗಾವಲು ವ್ಯವಸ್ಥೆ 'ಅರುದ್ರ' ರೇಡಾರ್, ಎಲೆಕ್ಟ್ರಾನಿಕ್ ಯುದ್ಧವ್ಯವಸ್ಥೆ 'ಧಾರಾಶಕ್ತಿ', ಲೇಸರ್ ಆಧಾರಿತ ಆಯುಧಗಳು, ವಾಯು ಪ್ರದೇಶ ರಕ್ಷಣಾ ವ್ಯವಸ್ಥೆಗಳು ಗಮನ ಸೆಳೆದವು.
'ಸಶಕ್ತಿ ಮತ್ತು ಸುರಕ್ಷಿತ ಭಾರತ' ವಿಷಯದಡಿ, ಮೂರೂ ಭದ್ರತಾಪಡೆಗಳು ನಡೆಸಿದ 'ಜಂಟಿ ಕಾರ್ಯಾಚರಣೆ' ಬಿಂಬಿಸುವ ಸ್ತಬ್ಧಚಿತ್ರ ಹಾಗೂ ಯುದ್ಧಭೂಮಿ ಮೇಲೆ ಕಣ್ಗಾವಲಿಡುವ ವ್ಯವಸ್ಥೆ 'ಸಂಜಯ' ಗಮನ ಸೆಳೆಯಿತು. 'ಅರ್ಜುನ' ಟ್ಯಾಂಕ್, ತೇಜಸ್ ಯುದ್ಧವಿಮಾನ, ಎಎಲ್ಎಚ್ ಹೆಲಿಕಾಪ್ಟರ್ ಮೂಲಕ ನೆಲ, ಜಲ ಮತ್ತು ವಾಯುಪ್ರದೇಶದಲ್ಲಿ ನಡೆಯುವ ಕಾರ್ಯಾಚರಣೆ ಪ್ರಸ್ತುತಪಡಿಸಲಾಯಿತು.
'ಟಿ-90 ಭೀಷ್ಮ' ಟ್ಯಾಂಕ್, ಎನ್ಎಜಿ ಕ್ಷಿಪಣಿ ವ್ಯವಸ್ಥೆಗಳು, ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳು, ಬಹು ಉಡ್ಡಯನ ರಾಕೆಟ್ ವ್ಯವಸ್ಥೆ 'ಪಿನಾಕಾ', ಮಲ್ಟಿಬ್ಯಾರೆಲ್ ರಾಕೆಟ್ ಲಾಂಚರ್ 'ಅಗ್ನಿಬಾಣ', 'ಆಕಾಶ್' ಆಯುಧ ವ್ಯವಸ್ಥೆ, ಎಲ್ಲ ಭೂಪ್ರದೇಶಗಳಲ್ಲಿಯೂ ಮುನ್ನುಗ್ಗಬಲ್ಲ ಸಾಮರ್ಥ್ಯದ ವಾಹನ 'ಚೇತಕ್' ಪ್ರದರ್ಶನವೂ ಇತ್ತು.
ಸರ್ಕಾರಿ ಶಾಲೆಗಳ ಬ್ಯಾಂಡ್ಗಳು ಭಾಗಿ
ಇದೇ ಮೊದಲ ಬಾರಿಗೆ ಮೂರು ಸರ್ಕಾರಿ ಶಾಲೆಗಳ ಬ್ಯಾಂಡ್ಗಳು ಭಾಗಿಯಾಗಿದ್ದವು. ಜಾರ್ಖಂಡ್ನ ಪಟ್ಮದಾ ಪಟ್ಟಣದ ಪಿ.ಎಂ.ಶ್ರೀ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ, ಸಿಕ್ಕಿಂನ ಗವರ್ನ್ಮೆಂಟ್ ವೆಸ್ಟ್ ಪಾಯಿಂಟ್ ಸೀನಿಯರ್ ಸೆಕಂಡರಿ ಸ್ಕೂಲ್ ಹಾಗೂ ಬೆಳಗಾವಿಯ ಪಿ.ಎಂ.ಶ್ರೀ ಕೇಂದ್ರೀಯ ವಿದ್ಯಾಲಯ ನಂ.2 ಶಾಲೆಯ ಪೈಪ್ ಬ್ಯಾಂಡ್ (ಬಾಲಕ ತಂಡ) ಪಾಲ್ಗೊಂಡಿದ್ದವು.
ಈ ಪೈಕಿ ಜಾರ್ಖಂಡ್ನ ಪಟ್ಮದಾ ತಂಡದ ಸದಸ್ಯರ ಪೈಕಿ ಬಹುತೇಕ ಬಾಲಕಿಯರು ಕೃಷಿ ಕೂಲಿಕಾರರ ಮತ್ತು ದಿನಗೂಲಿಗಳ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅಲ್ಲದೇ, ಬಹುತೇಕ ಬಾಲಕಿಯರಿಗೆ ಇದು ದೆಹಲಿಗೆ ಮೊದಲ ಪ್ರವಾಸವೂ ಆಗಿತ್ತು.
ವೈಶಿಷ್ಟ್ಯಗಳು
ದ್ವಿಚಕ್ರ ವಾಹನದ ಮೇಲಿದ್ದ 12 ಅಡಿ ಎತ್ತರದ ಏಣಿ ಮೇಲೆ ನಿಂತಿದ್ದ ಕ್ಯಾಪ್ಟನ್ ಡಿಂಪಲ್ ಸಿಂಗ್ ಭಾಟಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ವಂದನೆ ಸಲ್ಲಿಸಿದರು. ಈ ಮೂಲಕ ರಾಷ್ಟ್ರಪತಿಯೊಬ್ಬರಿಗೆ ಗೌರವ ವಂದನೆ ಸಲ್ಲಿಸಿದ ಸೇನೆಯ ಮೊದಲ ಮಹಿಳಾ ಅಧಿಕಾರಿ ಎಂಬ ವಿಶ್ವ ದಾಖಲೆ ಸ್ಥಾಪಿಸಿದರು
'ಸ್ವರ್ಣೀಮ ಭಾರತ: ಪರಂಪರೆ ಮತ್ತು ವಿಕಾಸ' ವಿಷಯದಡಿ ಒಟ್ಟು 31 ಸ್ತಬ್ಧಚಿತ್ರಗಳ ಪ್ರದರ್ಶನ
ಲೆಫ್ಟಿನೆಂಟ್ ಅಹಾನ್ ಕುಮಾರ್ ನೇತೃತ್ವದ ಅಶ್ವದಳ ಸೇನಾತುಕಡಿಗಳನ್ನು ಮುನ್ನಡೆಸಿತು. 1953ರಲ್ಲಿ ಸ್ಥಾಪನೆಗೊಂಡಿರುವ ಈ ಅಶ್ವದಳ ಈಗಲೂ ಸಕ್ರಿಯವಾಗಿರುವ ವಿಶ್ವದ ಏಕೈಕ ರೆಜಿಮೆಂಟ್ ಆಗಿದೆ
352 ಸದಸ್ಯರಿದ್ದ ಇಂಡೊನೇಷ್ಯಾ ಸೇನೆಯ ತುಕಡಿ ಪಥಸಂಚಲನದಲ್ಲಿ ಭಾಗಿಯಾಗಿ ಮೆಚ್ಚುಗೆ ಗಳಿಸಿತು
ಪಿ.ಎಂ.ಸೂರ್ಯ ಘರ್ ಯೋಜನೆ ಮತ್ತು ಪಿ.ಎಂ. ಕುಸುಮ ಯೋಜನೆಯಡಿ ನವೀಕರಿಸಬಹುದಾದ ಇಂಧನ ಬಳಕೆ ಮಾಡುವ ರೈತರು ಹಾಗೂ ಕುಟುಂಬಗಳ ಸದಸ್ಯರೂ ಭಾಗಿ
ತಮ್ಮ ಸಂಶೋಧನೆಗಳಿಗೆ ಪೇಟೆಂಟ್ ಪಡೆದವರ ಪೈಕಿ 100 ಮಂದಿ 100 ನವೋದ್ಯಮಿಗಳು ರಸ್ತೆ ನಿರ್ಮಾಣದ 300 ಕಾರ್ಮಿಕರು ಪಾಲ್ಗೊಂಡಿದ್ದರು
ಮಾಸಿಕ 'ಮನದ ಮಾತು' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಪೈಕಿ 400 ಮಂದಿಗೆ ಆಹ್ವಾನ
ವಿವಿಧ ರಾಜ್ಯಗಳ ಸಂಸ್ಕೃತಿ ಜಾನಪದ ಕಲೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳ ಪ್ರದರ್ಶನ ಕಲಾ ತಂಡಗಳಿಂದ ಪ್ರಸ್ತುತಿ
ಎನ್ಸಿಸಿ ಕೆಡೆಟ್ಗಳು ಎನ್ಎಸ್ಎಸ್ ಸ್ವಯಂ ಸೇವಕರಿಂದಲೂ ಪಥಸಂಚಲನ
ಸಂಗೀತ ನಾಟಕ ಅಕಾಡೆಮಿ ಸಿದ್ಧಪಡಿಸಿದ 11 ನಿಮಿಷಗಳ ನೃತ್ಯರೂಪಕ 'ಜಯತಿ ಜಯ ಮಮಃ ಭಾರತಂ' ಗಮನ ಸೆಳೆಯಿತು