ಹೋಶಿಯಾರ್ಪುರ: ಎಂಎಸ್ಪಿಗೆ ಕಾನೂನಿನ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಸಂಘಟನೆ ಅಡಿ ವಿವಿಧ ರೈತ ಸಂಘಗಳು ಒಟ್ಟುಗೂಡಿ ಪಂಜಾಬ್ದಾದ್ಯಂತ ಭಾನುವಾರ ಟ್ರ್ಯಾಕ್ಟರ್ ರ್ಯಾಲಿ ನಡೆಸಿದವು.
ಸಂಘಟನೆಗಳ ಪ್ರಮುಖ ನಾಯಕರೂ ಸೇರಿ ನೂರಾರು ರೈತರು ರ್ಯಾಲಿಯಲ್ಲಿ ಭಾಗವಹಿಸಿದ್ದರು. ರೈತರು ತಮ್ಮ ಟ್ರ್ಯಾಕ್ಟರ್ ಮೇಲೆ ಕಪ್ಪು ಬಾವುಟ ಹಾರಿಸಿದರು. ಗಣರಾಜ್ಯೋತ್ಸವದ ಅಂಗವಾಗಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಟ್ರ್ಯಾಕ್ಟರ್ ರ್ಯಾಲಿ ನಡೆಸುವಂತೆ ಎಸ್ಕೆಎಂ ಕರೆ ನೀಡಿತ್ತು.
ಇನ್ನೊಂದೆಡೆ, 2024ರ ಫೆಬ್ರುವರಿಯಿಂದಲೂ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಸಂಘಟನೆ ಕೂಡ ರಾಜ್ಯದಾದ್ಯಂತ ವಿವಿಧೆಡೆ ಭಾನುವಾರ ಪ್ರತಿಭಟನೆ ನಡೆಸಿತು. ದೊಡ್ಡ ದೊಡ್ಡ ಮಾಲ್ಗಳ ಎದುರು ಟ್ರ್ಯಾಕ್ಟರ್ ನಿಲ್ಲಿಸುವುದರ ಮೂಲಕ ಕೆಎಂಎಂ ಪ್ರತಿಭಟನೆ ನಡೆಸಿತು. ಇದಕ್ಕೆ ಮಾಲ್ಗಳ ಮಾಲೀಕರು ವಿರೋಧ ವ್ಯಕ್ತಪಡಿಸಿದರು.
'ದೊಡ್ಡ ಉದ್ಯಮಿಗಳು ಸಣ್ಣ ಉದ್ದಿಮೆದಾರರನ್ನು ಕಡೆಗಣಿಸಿದ್ದಾರೆ. ಆದ್ದರಿಂದ ಸಣ್ಣ ಉದ್ದಿಮೆದಾರರ ಪರವಾಗಿ ನಾವು ಹೀಗೆ ಮಾಡಿದ್ದೇವೆ. ಜೊತೆಗೆ ನಮ್ಮ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್ ಅವರಿಗಾಗಿಯೂ ಪ್ರತಿಭಟನೆ ನಡೆಸಿದ್ದೇವೆ' ಎಂದು ಕೆಎಂಎಂ ಸಂಘಟನೆಯ ರೈತರು ಹೇಳಿದರು.