ನವದೆಹಲಿ: ದೆಹಲಿಯ ಮೆಟ್ರೊಗಳಲ್ಲಿ ವಿದ್ಯಾರ್ಥಿಗಳಿಗೆ ಶೇ 50ರಷ್ಟು ರಿಯಾಯಿತಿ ನೀಡುವಂತೆ ಕೋರಿ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಗೆ ಶುಕ್ರವಾರ ಪತ್ರ ಬರೆದಿದ್ದಾರೆ ಎಂದು ಪಕ್ಷ ತಿಳಿಸಿದೆ.
ದೆಹಲಿ ವಿಧಾಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಕೇಜ್ರಿವಾಲ್ ಬೇಡಿಕೆಯನ್ನು ಮುಂದಿಟ್ಟದ್ದಾರೆ.
ಪ್ರಧಾನಿಗೆ ಬರೆದ ಪತ್ರದಲ್ಲಿ, 'ಮೆಟ್ರೊ ದರ ವಿದ್ಯಾರ್ಥಿಗಳಿಗೆ ದುಬಾರಿಯಾಗಲಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಶೇ 50ರಷ್ಟು ರಿಯಾಯಿತಿ ನೀಡುವ ಯೋಜನೆಯನ್ನು ಜಾರಿಗೊಳಿಸಿ. ಅರ್ಧ ಹಣವನ್ನು ಭರಿಸಲು ನಮ್ಮ ಸರ್ಕಾರ ಸಿದ್ಧವಿದೆ' ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಜ್ರಿವಾಲ್, ಚುನಾವಣೆಯಲ್ಲಿ ತಮ್ಮ ಎಎಪಿ ಪಕ್ಷ ಅಧಿಕಾರಕ್ಕೆ ಬಂದರೆ ಶಾಲಾ ಕಾಲೇಜಿಗೆ ಹೋಗುವ ಯುವಕರಿಗೆ ಉಚಿತ ಬಸ್ ಸಂಚಾರ ಕಲ್ಪಿಸುವುದಾಗಿ ಘೋಷಿಸಿದ್ದಾರೆ.
'ದೆಹಲಿಯಲ್ಲಿ ಮಹಿಳೆಯರು ಈಗಾಗಲೇ ಉಚಿತ ಬಸ್ ಸಂಚಾರವನ್ನು ಆನಂದಿಸುತ್ತಿದ್ದಾರೆ. ಇದೇ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ ಯುವಕರ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಲು ಮತ್ತು ಶಿಕ್ಷಣದ ಅವಕಾಶವನ್ನು ಒದಗಿಸಲು ಉಚಿತ ಸಂಚಾರ ನೀಡಲಾಗುವುದು' ಎಂದು ಹೇಳಿದ್ದಾರೆ.
'ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಘೋಷಣೆಯನ್ನು ತಕ್ಷಣಕ್ಕೆ ಜಾರಿ ಮಾಡಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಆಯ್ಕೆಯಾದರೆ ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಜಾರಿಗೊಳಿಸಿಲಾಗುವುದು' ಎಂದರು.