ನವದೆಹಲಿ: 'ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದಿದೆ ಎನ್ನುವ ವರದಿಗಳು ಉತ್ಪ್ರೇಕ್ಷಿತವಾದವುಗಳು. ವಿದ್ಯಾರ್ಥಿಗಳು ನಡೆಸಿದ ಚಳವಳಿಯ ಸಂದರ್ಭದಲ್ಲಿ ಆಗಸ್ಟ್ನಲ್ಲಿ ಕೆಲವೆಡೆ ದಾಳಿ ನಡೆದಿದ್ದವು. ಆದರೆ, ಇತ್ತೀಚೆಗೆ ದಾಳಿಗಳು ನಡೆದಿಲ್ಲ' ಎಂದು ಬಾಂಗ್ಲಾದೇಶದ ಗಡಿ ಕಾವಲು ಪಡೆಯ ಮಹಾನಿರ್ದೇಶಕ ಮೇಜರ್ ಜನರಲ್ ಮೊಹಮ್ಮದ್ ಅಶ್ರಫುಜಮಾನ್ ಗುರುವಾರ ಹೇಳಿದರು.
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರು ಆಡಳಿತ ಅಂತ್ಯಗೊಂಡು ಮಧ್ಯಂತರ ಸರ್ಕಾರ ರಚಣೆಯಾದ ಬಳಿಕ ಇದೇ ಮೊದಲ ಬಾರಿಗೆ ಭಾರತದ ಬಿಎಸ್ಎಫ್ ಮತ್ತು ಬಾಂಗ್ಲಾದ ಗಡಿ ಕಾವಲ ಪಡೆಯ ಮುಖ್ಯಸ್ಥರು ಮಾತುಕತೆ ನಡೆಸಿದರು. ಬಿಎಸ್ಎಫ್ನ ಮಹಾನಿರ್ದೇಶಕ ಡಲ್ಜೀತ್ ಸಿಂಗ್ ಚೌಧರಿ ಹಾಜರಿದ್ದರು. ಸಭೆ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಲಾಯಿತು.
'ಇತ್ತೀಚೆಗೆ ನಡೆದ ದುರ್ಗಾ ಪೂಜೆಯೇ ಇದಕ್ಕೆ ಸಾಕ್ಷಿ. ಯಾವುದೇ ಒಂದು ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗಿತ್ತು. ಹಿಂದೂಗಳು ತಮ್ಮ ಪೂಜೆಗಳನ್ನು ನೆರವೇರಿಸಲು ಯಾವುದೇ ಅಡ್ಡಿಯಾದಂತೆ ನೋಡಿಕೊಳ್ಳಲಾಗಿತ್ತು. ಭಯಪಟ್ಟುಕೊಂಡು ಬೆದರಿಕೆ ಇರುವ ಬಗ್ಗೆ ದೂರುಗಳು ದಾಖಲಾದಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಭದ್ರತೆ ನೀಡಿದ್ದೇವೆ' ಎಂದರು.
'ಮಾಧ್ಯಮಗಳ ವರದಿಗಳು ರಾಜಕಾರಣಿಗಳನ್ನು ಪ್ರಚೋದಿಸುವಂತಿದ್ದವು. ವರದಿಗಳನ್ನು ನೋಡಿಕೊಂಡು ರಾಜಕಾರಣಿಗಳು ಹೇಳಿಕೆಗಳನ್ನು ನೀಡಿದರು' ಎಂದರು.