ಪಟ್ನಾ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಜಯದ ಕೇಕೆ ಹಾಕಿರುವ ಬಿಜೆಪಿಯ ಕಣ್ಣು ಇದೀಗ ಬಿಹಾರದ ಮೇಲಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭಾ ಚುನಾವಣೆ ಇದೇ ವರ್ಷ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯುವ ಸಾಧ್ಯತೆ ಇದೆ. ರಾಷ್ಟ್ರ ರಾಜಧಾನಿಯಲ್ಲಿ ಸರಣಿ ಸಭೆಗಳನ್ನು ನಡೆಸಿರುವ ಬಿಜೆಪಿ ನಾಯಕತ್ವವು, ಮಹಾರಾಷ್ಟ್ರದಲ್ಲಿ ನಡೆಸಿದಂತಹ ಪ್ರಯೋಗಕ್ಕೆ ಬಿಹಾರದಲ್ಲಿ ಕೈ ಹಾಕಬಾರದು ಎಂದು ನಿರ್ಧರಿಸಿದೆ.
ಒಂದು ವೇಳೆ ಬಿಜೆಪಿಯು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಥವಾ ಮೈತ್ರಿ ಪಕ್ಷವಾದ ಜೆಡಿ(ಯು)ಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದರೂ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬುದಾಗಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿಯು ಅತಿಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡ ಕಾರಣ, ಅದರ ಮಿತ್ರಪಕ್ಷವಾದ ಶಿವಸೇನಾದ ಏಕನಾಥ ಶಿಂದೆ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಹಾಗಾಗಿ, ಬಿಹಾರ ವಿಚಾರದಲ್ಲಿ ಅನುಸರಿಸುತ್ತಿರುವ ನಡೆಯು ಭಿನ್ನವಾಗಿದೆ.
'ಬಿಹಾರ ಆಡಳಿತದ ಪಾಲುದಾರ ಪಕ್ಷಗಳು ಹಾಗೂ ಮತದಾರರಲ್ಲಿ ಗೊಂದಲಗಳನ್ನು ಪರಿಹರಿಸಲು ಮುಂದಾಗಿರುವ ಬಿಜೆಪಿ, ಮಹಾರಾಷ್ಟ್ರದಲ್ಲಿ ಮಾಡಿದ ಪ್ರಯೋಗವನ್ನು ಬಿಹಾರದಲ್ಲಿ ಪುನರಾವರ್ತಿಸುವುದಿಲ್ಲ ಎಂಬ ಸ್ಪಷ್ಟ ಹಾಗೂ ಗಟ್ಟಿ ಸಂದೇಶವನ್ನು ರವಾನಿಸಲು ಬಯಸುತ್ತಿದೆ' ಎಂದು ಸರಣಿ ಸಭೆಯಲ್ಲಿ ಭಾಗವಹಿಸಿದ್ದ ಕೇಸರಿ ಪಕ್ಷದ ಹಿರಿಯ ನಾಯರೊಬ್ಬರು ಹೇಳಿದ್ದಾರೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಅವರು, 'ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿರುವ ಎನ್ಡಿಎ ಸರ್ಕಾರಗಳು ಒಂದೇ ಅಲ್ಲ. ಬಿಜೆಪಿಯ ಉನ್ನತ ಮಟ್ಟದ ನಾಯಕರು ಬಿಹಾರ ಚುನಾವಣೆ ಬಳಿಕ ನಿತೀಶ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬಹುದು ಎಂಬಿತ್ಯಾದಿ ಸಂದೇಹಗಳನ್ನು ಹೋಗಲಾಡಿಸುವುದು ಈ ಕ್ರಮದ ಹಿಂದಿನ ಉದ್ದೇಶ' ಎಂದಿದ್ದಾರೆ.
ಬಿಜೆಪಿಯ ಕ್ರಮವನ್ನು ಜೆಡಿ(ಯು) ಸ್ವಾಗತಿಸಿದೆ. 'ಬಿಹಾರದ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನಡೆಸುತ್ತಿರುವ ನಿತೀಶ್ ಕುಮಾರ್, 2005ರಿಂದ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ' ಎಂದು ನಿತೀಶ್ ಆಪ್ತ ಹಾಗೂ ಬಿಹಾರ ಸಚಿವ ಅಶೋಕ್ ಚೌಧರಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಗೆ ನಿತೀಶ್ ಸವಾಲು
ಮಹಾರಾಷ್ಟ್ರದ ಏಕನಾಥ ಶಿಂದೆಗೆ ಹೋಲಿಸಿದರೆ, ನಿತೀಶ್ ಕುಮಾರ್ ಅವರು ಅನುಭವಿ ರಾಜಕಾರಣಿ. ಬಿಜೆಪಿಯ ತಂತ್ರಗಳಿಗೆ ಪ್ರತಿತಂತ್ರಗಳನ್ನು ರೂಪಿಸುವ ಚತುರತೆ ಅವರಲ್ಲಿದೆ.
'ಜಾತಿ ಮೇಲಾಟವಿರುವ ಬಿಹಾರದಲ್ಲಿ, ಅಂದಾಜು 8 ಕೋಟಿ ಮತದಾರರಿದ್ದಾರೆ. ಅದರಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ, ವಿವಿಧ ಇಲಾಖೆಗಳಲ್ಲಿ ಮಹಿಳೆಯರಿಗೆ ಉದ್ಯೋಗ, ಪಂಚಾಯತ್ ರಾಜ್ನಲ್ಲಿ ಮೀಸಲಾತಿ ಸೇರಿದಂತೆ ವಿವಿಧ ಯೋಜನೆಗಳ ಪರಿಣಾಮವಾಗಿ ರಾಜ್ಯದಲ್ಲಿ ಕೌಂಟುಂಬಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿದೆ. ಅದರ ಪರಿಣಾಮವಾಗಿ ಗಮನಾರ್ಹ ಪ್ರಮಾಣದ ಮಹಿಳೆಯರ ಮತಗಳನ್ನು ನಿತೀಶ್ ಕುಮಾರ್ ಸೆಳೆಯಬಲ್ಲರು' ಎಂದು ರಾಜಕೀಯ ತಜ್ಞ ಸುಧಾಂಶು ಕುಮಾರ್ ವಿಶ್ಲೇಷಿಸಿದ್ದಾರೆ.
'ನಿತೀಶ್ ಕುಮಾರ್ ಎರಡು ಕಾರಣಕ್ಕೆ ಬಿಜೆಪಿಗೆ ಸವಾಲಾಗಲಿದ್ದಾರೆ' ಎಂದಿರುವ ವಿಶ್ಲೇಷಕ ಅಜಯ್ ಕುಮಾರ್, ಅದಕ್ಕೆ ಸಮರ್ಥನೆಯನ್ನೂ ನೀಡಿದ್ದಾರೆ. 'ಮೊದಲನೇಯದ್ದು, ನಿತೀಶ್ ಅವರು ಎನ್ಡಿಎಯಲ್ಲಿರಲಿ ಅಥವಾ ಮಹಾಘಟಬಂಧನ್ನಲ್ಲಿಯೇ ಇರಲಿ, 2010ರಿಂದ ಈಚೆಗೆ ಶೇ 15 ರಷ್ಟು ಮತಗಳು ಅವರ ಪರ ಸ್ಥಿರವಾಗಿವೆ. 2010ರಲ್ಲಿ ಬಿಜೆಪಿ ಜೊತೆ ಸೇರಿ ಐದನೇ ನಾಲ್ಕು ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸಿದ್ದ ನಿತೀಶ್, 2015ರಲ್ಲಿ ಕಾಂಗ್ರೆಸ್ ಮತ್ತು ಆರ್ಜೆಡಿ ಜೊತೆಗೂಡಿ ಬಿಜೆಪಿಗೆ ಹೀನಾಯ ಸೋಲುಣಿಸಿದ್ದರು' ಎಂದು ವಿವರಿಸಿದ್ದಾರೆ.
'ನಿತೀಶ್ ಅವರ ಶೇ 15ರಷ್ಟು ಮತಗಳು ಬಿಜೆಪಿಯ ಶೇ 19ರಷ್ಟು, ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿ (ರಾಮ್ ವಿಲಾಸ್) ಪಕ್ಷದ ಶೇ 6ರಷ್ಟು ಮತ್ತು ಸಣ್ಣ ಪಕ್ಷಗಳಾದ ಜೀತನ್ ರಾಮ್ ಮಾಂಝಿ ಅವರ ಎಚ್ಎಎಂಗಿರುವ ಶೇ 2ರಷ್ಟು ಮತಗಳು ಸೇರಿದರೆ, ಎನ್ಡಿಎ ಮತದಾರರ ಪ್ರಮಾಣ ಶೇ 40ಕ್ಕಿಂತ ಹೆಚ್ಚಾಗುತ್ತಿದೆ. ಮೈತ್ರಿಕೂಟವು ಬಹುಮತ ಸಾಧಿಸಲು ಇಷ್ಟು ಮತಗಳು ಬೇಕು' ಎಂದಿದ್ದಾರೆ.
'ಎರಡನೇಯದ್ದಾಗಿ, ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಆಡಳಿತ ಕೌಶಲ ಹಾಗೂ ವ್ಯಕ್ತಿತ್ವಕ್ಕೆ ಸಾಟಿಯಾಗಬಲ್ಲ ನಾಯಕರ ಕೊರತೆ ಬಿಜೆಪಿಗೆ ಇದೆ' ಎಂದು ಸ್ಪಷ್ಟನೆ ನೀಡುತ್ತಾರೆ.