ನವದೆಹಲಿ: ಅಸ್ಸಾಂನಲ್ಲಿ ಬಿಜೆಪಿಯ 'ದುರಾಡಳಿತ' ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ವಾಗ್ದಾಳಿ ನಡೆಸಿದ್ದು, ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ 'ಜುಮ್ಲಾ' ಕಾರ್ಖಾನೆಯನ್ನು ಸ್ಥಾಪಿಸಿದ್ದು, ಅಲ್ಲಿನ ಮುಖ್ಯಮಂತ್ರಿ ಅದರ ಮಾಸ್ಟರ್ ಮೈಂಡ್ ಎಂದು ಟೀಕಿಸಿದ್ದಾರೆ.
ಬಿಜೆಪಿ ಆಡಳಿತದ ವಿರುದ್ಧ ಅಲ್ಲಿನ ಜನ ಆಕ್ರೋಶಿತರಾಗಿದ್ದು, ಮುಂದಿನ ಬಾರಿ ಕಾಂಗ್ರೆಸ್ಗೆ ಅವಕಾಶ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
'ಅಸ್ಸಾಂನಲ್ಲಿ ಮೋದಿಯವರು ಜುಮ್ಲಾದ ಕಾರ್ಖಾನೆ ಸ್ಥಾಪಿಸಿದ್ದಾರೆ. ಅದರ ಮಾಸ್ಟರ್ ಮೈಂಡ್ ಅಲ್ಲಿನ ಭಾರಿ ಭ್ರಷ್ಟಾಚಾರಿ ಮುಖ್ಯಮಂತ್ರಿ. ಅಸ್ಸಾಂನ ಕಾಂಗ್ರೆಸ್ ನಾಯಕರನ್ನು ರಾಜಕೀಯ ಹಾಗೂ ದೈಹಿಕವಾಗಿ ದಾಳಿ ಮಾಡಲಾಗುತ್ತಿದೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡುವ ಮೂಲಕ ಜನ ಪಾಠ ಕಲಿಸಲಿದ್ದಾರೆ' ಎಂದು ಹೇಳಿದ್ದಾರೆ.
'ಬಿಜೆಪಿಯ ಭೂ ಮಾಫಿಯಾದ ಭ್ರಷ್ಟಾಚಾರ, ದ್ವೇಷ ಮತ್ತು ದುರಾಡಳಿತದ ಪರಿಣಾಮಗಳನ್ನು ಅಸ್ಸಾಂ ಅನುಭವಿಸುತ್ತಿದೆ. ಯುವಜನರ ನಿರುದ್ಯೋಗ, ಚಹಾ ತೋಟದ ಕಾರ್ಮಿಕರ ಅಸಹಾಯಕತೆ, ಅಕ್ರಮ ವಿದೇಶಿಯರ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ನ ಖಂಡನೆ ಮತ್ತು ಬಿಜೆಪಿಯ ಬೂಟಾಟಿಕೆ ಎಲ್ಲರಿಗೂ ತಿಳಿದಿದೆ' ಎಂದು ಅವರು ಹೇಳಿದ್ದಾರೆ.
'ಅಭಿವೃದ್ಧಿ ಮತ್ತು ಆರ್ಥಿಕತೆಯ ವಿಷಯದಲ್ಲಿ ರಾಜ್ಯವು ಪ್ರತಿಯೊಂದು ಮಟ್ಟದಲ್ಲೂ ಹಿಂದುಳಿದಿದೆ. ಅಸ್ಸಾಂನ 3.5 ಕೋಟಿ ಜನರು ತೀವ್ರ ಕೋಪಗೊಂಡಿದ್ದಾರೆ. ಮೋದಿ ಅವರ ಯಾವುದೇ ಘೋಷಣೆ ಈಗ ಅವರ ಕೋಪವನ್ನು ಶಮನಗೊಳಿಸಲು ಸಾಧ್ಯವಿಲ್ಲ. ಅಸ್ಸಾಂ ಮತ್ತು ಈಶಾನ್ಯದಲ್ಲಿ ಬದಲಾವಣೆ ಖಚಿತ' ಎಂದು ಖರ್ಗೆ ಹೇಳಿದ್ದಾರೆ.