ನವದೆಹಲಿ: ವಂಶವಾಹಿಯಿಂದಾಗಿ ಬರುವ ಬೆನ್ನುಹುರಿಯ ಸಮಸ್ಯೆಯೊಂದನ್ನು ಎದುರಿಸುತ್ತಿರುವ ವ್ಯಕ್ತಿಯೊಬ್ಬರಿಗೆ ಗರಿಷ್ಠ ಮಿತಿಯನ್ನು ಮೀರಿ ₹18 ಲಕ್ಷ ಮೌಲ್ಯದ ಔಷಧಗಳನ್ನು ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಕಾಯಿಲೆಗೆ ಚಿಕಿತ್ಸೆ ಒದಗಿಸಲು ಕೇಂದ್ರ ಸರ್ಕಾರದಿಂದ ಗರಿಷ್ಠ ₹50 ಲಕ್ಷದವರೆಗೆ ನೆರವು ನೀಡಲು ನಿಯಮಗಳಲ್ಲಿ ಅವಕಾಶ ಇದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇರುವ ವಿಭಾಗೀಯ ಪೀಠವು ಕೇರಳ ಹೈಕೋರ್ಟ್ನ ಆದೇಶಕ್ಕೆ ತಡೆ ನೀಡಿದೆ.
24 ವರ್ಷ ವಯಸ್ಸಿನ ಸೆಬಾ ಪಿ.ಎ. ಅವರಿಗೆ ಚಿಕಿತ್ಸೆ ಮುಂದುವರಿಸಲು ಒಂದು ಬಾರಿಯ ಕ್ರಮವಾಗಿ ರಿಸ್ಡಿಪ್ಲಾಮ್ ಔಷಧವನ್ನು ನೀಡಬೇಕು ಎಂದು ಹೈಕೋರ್ಟ್ ಹೇಳಿತ್ತು.
ಈ ಔಷಧದ ಒಂದು ಬಾಟಲಿಗೆ ₹6.2 ಲಕ್ಷ ಬೆಲೆ ಇದೆ. 20 ಕೆ.ಜಿ.ಗಿಂತ ಕಡಿಮೆ ತೂಕ ಇರುವ ವ್ಯಕ್ತಿಗಳಿಗೆ ತಿಂಗಳಿಗೆ ಒಂದು ಬಾಟಲಿ ಔಷಧಿ ನೀಡಬೇಕಾಗುತ್ತದೆ. ಹೆಚ್ಚು ತೂಕ ಇರುವವರಿಗೆ ಮೂರು ಬಾಟಲಿಗಳವರೆಗೆ ಬೇಕಾಗುತ್ತದೆ. ಇದರಿಂದಾಗಿ ಈ ಕಾಯಿಲೆಗೆ ದೀರ್ಘ ಅವಧಿಯವರೆಗೆ ಚಿಕಿತ್ಸೆ ಒದಗಿಸುವುದು ಹಣಕಾಸಿನ ದೃಷ್ಟಿಯಿಂದ ಭಾರಿ ಹೊರೆ.
ರೋಗಿಗಳಿಗೆ ₹50 ಲಕ್ಷದವರೆಗೆ ಮಾತ್ರ ನೆರವು ಒದಗಿಸಲು ಅವಕಾಶ ಇದೆ ಎಂದು ಕೇಂದ್ರವು ಪೀಠಕ್ಕೆ ತಿಳಿಸಿತು.
ಪ್ರಕರಣವನ್ನು ಪರಿಶೀಲಿಸಿ ₹50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವೆಚ್ಚಗಳನ್ನು ಭರಿಸಲು ಅನುಮತಿ ನೀಡುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ಕೇಂದ್ರಕ್ಕೆ ಪೀಠವು ಸೂಚಿಸಿದೆ.