ಲಖನೌ: ಮಹಾ ಕುಂಭಮೇಳದಲ್ಲಿ ಸಂಗಮದ ಸಮೀಪ ಮೌನಿ ಅಮವಾಸ್ಯೆಯಂದು ಸಂಭವಿಸಿದ ಕಾಲ್ತುಳಿತ ಪ್ರಕರಣದ ತನಿಖೆಗೆ ರಚಿಸಿದ್ದ ನ್ಯಾಯಾಂಗ ಆಯೋಗದ ಅಧಿಕಾರ ವ್ಯಾಪ್ತಿಯನ್ನು ಉತ್ತರ ಪ್ರದೇಶ ಸರ್ಕಾರ ವಿಸ್ತರಿಸಿದೆ.
ಸಂಗಮ ಸಮೀಪ ನಡೆದಿದ್ದವು ಎಂದು ಎನ್ನಲಾದ ಇತರ ಎರಡು ಕಾಲ್ತುಳಿತ ಪ್ರಕರಣಗಳ ಬಗ್ಗೆಯೂ ಆಯೋಗವು ತನಿಖೆ ನಡೆಸಲಿದೆ ಎಂದು ಸರ್ಕಾರ ತಿಳಿಸಿದೆ.
ಉತ್ತರ ಪ್ರದೇಶ ಸರ್ಕಾರವು ಅಲಹಾಬಾದ್ ಹೈಕೋರ್ಟ್ಗೆ ಸೋಮವಾರ ಈ ಮಾಹಿತಿ ನೀಡಿದೆ.
ಪ್ರಕರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ನಿರ್ದೇಶನ ನೀಡಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ. ಮೌನಿ ಅಮವಾಸ್ಯೆಯಂದು ಇನ್ನೂ ಎರಡು ಕಡೆಗಳಲ್ಲಿ ಕಾಲ್ತುಳಿತ ನಡೆದಿದೆ ಎಂಬುದರ ಕುರಿತ ವಿಡಿಯೊ ಮತ್ತು ಮಾಧ್ಯಮ ವರದಿ ಇರುವ ಪೆನ್ಡ್ರೈವ್ ಅನ್ನು ಅರ್ಜಿದಾರರು ಕೋರ್ಟ್ಗೆ ಸಲ್ಲಿಸಿದ್ದಾರೆ.
ಮೌನಿ ಅಮವಾಸ್ಯೆಯಂದು ನಡೆದ ಕಾಲ್ತುಳಿತದಲ್ಲಿ 30 ಮಂದಿ ಮೃತಪಟ್ಟಿದ್ದರು ಮತ್ತು ಹಲವರು ಗಾಯಗೊಂಡಿದ್ದರು.