ಪೆರ್ಲ: ಎಣ್ಮಕಜೆ ಪಂಚಾಯತಿ ವ್ಯಾಪ್ತಿಯ 1 ನೇ ವಾರ್ಡು ಸಾಯ ಜಾನುಗುರಿಯಲ್ಲಿ ವಾಸಿಸುವ ಮೂರು ಕುಟುಂಬಗಳು ಸಿಪಿಎಂ ತೊರೆದು ಬಿಜೆಪಿಗೆ ಸೇರಿದ್ದಾರೆ. ಇಲ್ಲಿನ ಚನಿಯಪ್ಪ ನಾಯ್ಕ ಹಾಗೂ ಸಂಗಡಿಗರು ಸಕ್ರಿಯ ಸಿಪಿಎಂ ಕಾರ್ಯಕರ್ತರಾಗಿದ್ದರು. ಹಲವು ವರ್ಷಗಳಿಂದ ಸೃಷ್ಠಿಯಾದ ದಾರಿ ಸಮಸ್ಯೆಯೇ ಇವರು ಸಿಪಿಎಂ ತೊರೆಯಲು ಕಾರಣವೆನ್ನಲಾಗಿದೆ. ಸ್ವಂತ ಸ್ಥಳದಲ್ಲಿ ಹಾದು ಹೋಗುವ ದಾರಿಯನ್ನು ಸಾರ್ವಜನಿಕ ದಾರಿಯಾಗಿ ಮಾಡಬೇಕು ಎಂದು ಸಿಪಿಎಂ ನೇತಾರರು ನಿರಂತರವಾಗಿ ಕಿರುಕುಳ ನಿಡುತ್ತಿದ್ದು ಇದರಿಂದ ಬೇಸತ್ತು ಬಿಜೆಪಿ ಸೇರಿರುವುದಾಗಿ ಚನಿಯಪ್ಪ ನಾಯ್ಕ ಹೇಳಿದ್ದಾರೆ. ಚನಿಯಪ್ಪ ನಾಯ್ಕ ಅವರ ಪುತ್ರನಿಗೆ 15 ಸೆಂಟ್ ಸ್ಥಳ ನೀಡಿದ್ದು ಇಲ್ಲಿ ಶೆಡ್ ನಿರ್ಮಿಸಲಾಗಿದೆ. ಸ್ವಲ್ಪ ದಿನಗಳ ಹಿಂದೆ ಸಿಪಿಎಂ ಕಾರ್ಯಕರ್ತರು ಈ ಶೆಡ್ ಮುರಿದಿದ್ದರು. ಮಾತ್ರವಲ್ಲ ಈ ಮನೆಯಲ್ಲಿ ವಾಸಿಸುವ ರಾಮಚಂದ್ರ, ಪತ್ನಿ ವಿಜಯಲಕ್ಷ್ಮಿ, ಅಪ್ರಾಪ್ತರಾದ ಇಬ್ಬರು ಹೆಣ್ಣು ಮಕ್ಕಳು ಎಂಬವರನ್ನು ಬೆದರಿಸಲಾಗಿತ್ತು.
ಘಟನೆ ನಡೆದ ಸ್ಥಳಕ್ಕೆ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಪಂಚಾಯತಿ ಘಟಕ ಅಧ್ಯಕ್ಷ ಸುಮಿತ್ ರಾಜ್, ಇತರರಾದ ಸ್ವಾಗತ್ ಕುಮಾರ್ ಸೀತಾಂಗೋಳಿ, ಹಿಂದು ಜಾಗರಣ ವೇದಿಕೆ ನೇತಾರರಾದ ಅಕ್ಷಯ್ ರಜಪೂತ್, ಗೋಪಾಲ ಪಾಟಾಳಿ ಮೊದಲಾದವರು ಭೇಟಿ ನೀಡಿ ಈ ಕುಟುಂಬಗಳನ್ನು ಸಂತೈಸಿದರು. ಈ ಸಂದರ್ಭದಲ್ಲಿ ಕಳೆದ ಹಲವು ವರ್ಷಗಳಿಂದ ಸಿಪಿಎಂ ಬೆಂಬಲಿಗರಾಗಿದ್ದ ಈ ಮೂರು ಕುಟುಂಬಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದು ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಈ ಘಟನೆಯ ಬಗ್ಗೆ ಸಮಗ್ರ ತನಿಖೆ ಹಾಗೂ ಎಡರಂಗದ ಬೆದರಿಕೆ ತಂತ್ರವನ್ನು ಮಟ್ಟ ಹಾಕಲು ಸಂಘಟಿತರಾಗುವಂತೆ ಬಿಜೆಪಿ ಕರೆ ನೀಡಿದೆ.