ಮುಂಬೈ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಲಾಭ ಗಳಿಕೆಗಾಗಿ ದೇಶದ ಈಕ್ವಿಟಿ ಷೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಭಾರತೀಯ ಮಾರುಕಟ್ಟೆ, ಭಾರತದ ಆರ್ಥಿಕತೆಯು ಹೂಡಿಕೆದಾರರಿಗೆ ಉತ್ತಮ ಆದಾಯ ನೀಡುತ್ತಿವೆ ಎಂದು ಹೇಳಿದರು.
ಕಳೆದ ವರ್ಷ ಅಕ್ಟೋಬರ್ನಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹1.56 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಪೈಕಿ 2025ರ ಆರಂಭದಿಂದ ಇಲ್ಲಿಯವರೆಗೆ ಸುಮಾರು ₹1 ಲಕ್ಷ ಕೋಟಿ ಷೇರು ಮಾರಲಾಗಿದೆ. ಇದು ಷೇರು ಸೂಚ್ಯಂಕಗಳ ಇಳಿಕೆಗೆ ಮತ್ತು ಹೂಡಿಕೆದಾರರ ಸಂಪತ್ತು ಕರಗಲು ಕಾರಣವಾಗಿದೆ ಎಂದರು.
ಸರ್ಕಾರ ಮತ್ತು ಆರ್ಬಿಐ ದರ ನಿಯಂತ್ರಣ ಮಾಡುವ ಮೂಲಕ ಹಣದುಬ್ಬರ ಇಳಿಕೆಗೆ ಕ್ರಮ ಕೈಗೊಂಡಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಮಾತನಾಡಿ, ಜಾಗತಿಕ ಅನಿಶ್ಚಿತ ಸ್ಥಿತಿಯಿಂದಾಗಿ ಹೂಡಿಕೆದಾರರು ತಮ್ಮ ದೇಶದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಈ ಬದಲಾವಣೆ ತಾತ್ಕಾಲಿಕ ಆಗಿರಬಹುದು. ಮುಂದಿನ ದಿನಗಳಲ್ಲಿ ಚೇತರಿಕೆ ಕಾಣಲಿದೆ ಎಂದು ಹೇಳಿದ್ದಾರೆ.