ನವದೆಹಲಿ: ದೆಹಲಿ ನೂತನ ಮುಖ್ಯಮಂತ್ರಿಯಾಗಿ ಇಂದು (ಗುರುವಾರ) ಪ್ರಮಾಣವಚನ ಸ್ವೀಕರಿಸಿರುವ ರೇಖಾ ಗುಪ್ತಾ ಮತ್ತು ಸಚಿವರಿಗೆ ಅಭಿನಂದನೆ ಸಲ್ಲಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ರಾಷ್ಟ್ರ ರಾಜಧಾನಿಯಲ್ಲಿ ಮೋಸದ ಆಡಳಿತ ಅಂತ್ಯವಾಗಿದೆ' ಎಂದು ಹೇಳಿದ್ದಾರೆ.
'ದೆಹಲಿಯ ಬಿಜೆಪಿ ಸರ್ಕಾರವು ನಗರವನ್ನು ಸ್ವಚ್ಛ, ಸುಂದರ ಮತ್ತ ಸಮೃದ್ಧಗೊಳಿಸುವ ಮೂಲಕ ವಿಶ್ವದ ಅತ್ಯುತ್ತಮ ರಾಜಧಾನಿಯನ್ನಾಗಿ ಮಾಡಲಿದ್ದೇವೆ' ಎಂದು ಅವರು ಭರವಸೆ ನೀಡಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಎದುರಾಗಿರುವ ಹೀನಾಯ ಸೋಲನ್ನು ಉಲ್ಲೇಖಿಸಿರುವ ಅಮಿತ್ ಶಾ, 'ಹಿಂದಿನ ಸರ್ಕಾರ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಮತ್ತೊಂದೆಡೆ ಸೇವೆ ಹಾಗೂ ಅರ್ಪಣೆಗೆ ಪರ್ಯಾಯವಾಗಿರುವ ಬಿಜೆಪಿಯನ್ನು ದೆಹಲಿಯ ಜನತೆ ಆಯ್ಕೆ ಮಾಡಿದ್ದಾರೆ' ಎಂದು ಹೇಳಿದ್ದಾರೆ.
'ದೆಹಲಿಯ ಶೋಷಿತರು, ಮಹಿಳೆಯರು, ಯುವಜನತೆ ಮತ್ತು ಬಡವರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿ ರೂಪಿಸಿರುವ ಅಭಿವೃದ್ಧಿ ಹೊಂದಿದ ದೃಷ್ಟಿಕೋನವು ನಿಮ್ಮೆಲ್ಲರ ಸಮರ್ಥ ನಾಯಕತ್ವದಲ್ಲಿ ಖಂಡಿತವಾಗಿಯೂ ನನಸಾಗಲಿದೆ' ಎಂದು ಅವರು ಹೇಳಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ನಡೆದ ಚುನಾವಣೆಯಲ್ಲಿ 48 ಕ್ಷೇತ್ರಗಳನ್ನು ಗೆದ್ದು ಬಿಜೆಪಿ 26 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಎಎಪಿ 22 ಸ್ಥಾನಗಳಲ್ಲಿ ಗೆದ್ದರೆ ಕಾಂಗ್ರೆಸ್ಗೆ ಒಂದೇ ಒಂದು ಸ್ಥಾನ ದೊರಕಿರಲಿಲ್ಲ.