ವಾರಾಣಸಿ: ಮಹಾಶಿವರಾತ್ರಿಯ ಪ್ರಯುಕ್ತ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿರುವ ಕಾರಣ ಫೆ.25 -27ರವರೆಗೆ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಐಪಿ ದರ್ಶನವನ್ನು ರದ್ದು ಮಾಡಲಾಗಿದೆ.
ಈ ಕುರಿತು ದೇವಾಲಯದ ಮುಖ್ಯ ನಿರ್ವಾಹಕ ಅಧಿಕಾರಿ ವಿಶ್ವ ಭೂಷಣ್ ಮಿಶ್ರಾ ಮಾತನಾಡಿ, 'ಮಹಾಕುಂಭ ಮೇಳದಿಂದ ಕಾಶಿಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆಯೂ ದುಪ್ಪಟ್ಟಾಗಿದೆ.
ಇದರ ನಡುವೆ ಫೆ.26ರಂದು ಮಹಾಶಿವರಾತ್ರಿಯಿದೆ. ಹೀಗಾಗಿ ದೇಶದ ವಿವಿದೆಡೆಯಿಂದ ಭಕ್ತರು ಮಾತ್ರವಲ್ಲದೆ ವಿವಿಧ ಆಖಾಡಾಗಳ ಸನ್ಯಾಸಿಗಳು, ನಾಗಾಸಾಧುಗಳು ಕಾಶಿಗೆ ಬರುವ ನಿರೀಕ್ಷೆಯಿದೆ' ಎಂದರು
ಇದಲ್ಲದೆ, 'ನಾಗಾಸಾಧುಗಳು ಮಹಾಶಿವರಾತ್ರಿಯಂದು ಕಾಶಿಯಲ್ಲಿ ಮೆರವಣಿಗೆ ನಡೆಸಲಿದ್ದಾರೆ. ಇದರಿಂದಾಗಿ ದೇಗುಲದ 4ನೇ ದ್ವಾರವನ್ನು ಮುಚ್ಚಲಾಗುತ್ತದೆ. ಇದು ಇತರ ಭಕ್ತರು ಹೆಚ್ಚಿನ ಸಮಯ ದರ್ಶನಕ್ಕೆ ಕಾಯುವಂತೆ ಮಾಡುತ್ತದೆ. ಸೆಕೆ ಮತ್ತು ಶುಷ್ಕ ವಾತಾವರಣ ಇರುವ ಕಾರಣ ಹೆಚ್ಚು ಹೊತ್ತು ಭಕ್ತರು ಸರತಿ ಸಾಲಿನಲ್ಲಿ ನಿಲ್ಲುವುದರಿಂದ ಮಕ್ಕಳು, ಮಹಿಳೆಯರು, ವೃದ್ಧರಿಗೆ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ. ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು, ಮೂರು ದಿನಗಳ ಕಾಲ ವಿಐಪಿ ದರ್ಶನವನ್ನು ಸಂಪೂರ್ಣವಾಗಿ ರದ್ದು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ' ಎಂದರು.
ಕಳೆದ ವರ್ಷ ಮಹಾಶಿವರಾತ್ರಿಯಂದು ವಿಶ್ವನಾಥ ದೇಗುಲಕ್ಕೆ 12 ಲಕ್ಷ ಜನ ಭಕ್ತರು ಭೇಟಿ ನೀಡಿದ್ದರು. ಈ ಬಾರಿ ಮಹಾಕುಂಭ ಮೇಳವೂ ನಡೆಯುತ್ತಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಲಿದೆ ಎಂದು ಮಾಹಿತಿ ನೀಡಿದರು.