ಮಲಪ್ಪುರಂ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಡೆರೆಕ್ ಒಬ್ರಯಾನ್ ಮತ್ತು ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಅವರು ಇಂದು (ಶನಿವಾರ) ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ (ಐಯುಎಂಎಲ್) ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಸಾದಿಕ್ ಅಲಿ ಶಿಹಾಬ್ ತಂಗಳ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಟಿಎಂಸಿ ನಾಯಕರ ಭೇಟಿ ಕುರಿತು ಮಾತನಾಡಿದ ಶಿಹಾಬ್ ತಂಗಳ್, 'ಇದು ಸೌಹಾರ್ದ ಭೇಟಿಯಾಗಿದೆಯೇ ಹೊರತು ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಟಿಎಂಸಿಯು 'ಇಂಡಿಯಾ' ಮೈತ್ರಿಕೂಟದ ಭಾಗವಾಗಿರುವುದರಿಂದ ಮುಂಬರುವ ಚುನಾವಣೆಗಳಿಗಾಗಿ ಮೈತ್ರಿಯನ್ನು ಮತ್ತಷ್ಟು ಬಲಪಡಿಸುವುದು ಮುಖ್ಯವಾಗಿದೆ' ಎಂದು ಹೇಳಿದ್ದಾರೆ.
ಎಲ್ಡಿಎಫ್ನಿಂದ ಅಂತರ ಕಾಯ್ಡುಕೊಂಡಿದ್ದ ಶಾಸಕ ಪಿ.ವಿ. ಅನ್ವರ್ ಅವರು ಈಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಬಳಿಕ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಸಿಪಿಐ(ಎಂ) ಬೆಂಬಲದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಒಂದೂವರೆ ವರ್ಷದ ಅವಧಿ ಇರುವಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅನ್ವರ್ ಅವರು ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ತೃಣಮೂಲ ಪಕ್ಷವು, 'ಅನ್ವರ್ ಅವರನ್ನು ಕೇರಳ ರಾಜ್ಯ ಘಟಕದ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ' ಎಂದು 'ಎಕ್ಸ್' ನಲ್ಲಿ ತಿಳಿಸಿತ್ತು.
'ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಯುಡಿಎಫ್ನಿಂದ ಕಣಕ್ಕಿಳಿಯುವ ಅಭ್ಯರ್ಥಿಯನ್ನು ಬೆಂಬಲಿಸಲಿದ್ದೇನೆ' ಎಂದು ಇದೇ ವೇಳೆ ಘೋಷಿಸಿದ್ದರು.