ಇಂಫಾಲ್: ಬಿಜೆಪಿ ಮಣಿಪುರ ಉಸ್ತುವಾರಿ ಸಂಬಿತ್ ಪಾತ್ರಾ ಅವರು ಪಕ್ಷದ ಕೆಲವು ಶಾಸಕರ ಜೊತೆ ಇಲ್ಲಿನ ಹೋಟೆಲ್ ಒಂದರಲ್ಲಿ ಸೋಮವಾರ ಸಭೆ ನಡೆಸಿ, ಪಕ್ಷದ ಮುಂದಿನ ನಡೆ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಎನ್. ಬಿರೇನ್ ಸಿಂಗ್ ಅವರು ಮಣಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಪಾತ್ರಾ ಅವರು ಸ್ಪೀಕರ್ ಥೊಕ್ಚೊಮ್ ಸತ್ಯಬ್ರತ ಅವರನ್ನು ಕೂಡ ಭೇಟಿ ಮಾಡಿದರು ಎಂದು ಮೂಲಗಳು ಹೇಳಿವೆ. ಬಿಜೆಪಿಯ ಶಾಸಕರು ರಾಜ್ಯದಲ್ಲಿ ಅಥವಾ ಹೊರಗಡೆ ಮುಂದಿನ 48 ಗಂಟೆಗಳಲ್ಲಿ ಇನ್ನಷ್ಟು ಸಭೆಗಳನ್ನು ನಡೆಸುವ ಸಾಧ್ಯತೆ ಇದೆ.
ರಾಜಧಾನಿ ಇಂಫಾಲ್ನ ಎಲ್ಲೆಡೆ ಭದ್ರತೆ ಬಿಗಿಗೊಳಿಸಲಾಗಿದೆ. ಅದರಲ್ಲೂ, ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಬಿರೇನ್ ಸಿಂಗ್ ಅವರ ರಾಜೀನಾಮೆಯನ್ನು ಸ್ವಾಗತಿಸಿರುವ ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೆ. ಮೇಘಚಂದ್ರ ಅವರು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ನಡೆಯನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.
'ಹೊಸ ನಾಯಕ ಹಾಗೂ ಹೊಸ ಸರ್ಕಾರವನ್ನು ಕಾಂಗ್ರೆಸ್ ಬಯಸುತ್ತದೆ. ರಾಷ್ಟ್ರಪತಿ ಆಡಳಿತವನ್ನು ನಾವು ವಿರೋಧಿಸುತ್ತೇವೆ. ಏಕೆಂದರೆ ಕೇಂದ್ರ ಸರ್ಕಾರವು ಜನರ ಆದೇಶವನ್ನು ಗೌರವಿಸಬೇಕು' ಎಂದು ಅವರು ಸುದ್ದಿಗಾರರ ಬಳಿ ಹೇಳಿದರು.
ರಾಜ್ಯದ ಬಜೆಟ್ ಅಧಿವೇಶನವು ಸೋಮವಾರದಿಂದ ಆರಂಭವಾಗಬೇಕಿತ್ತು. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ಮುಂದಾಗಿದ್ದವು. ಆದರೆ ಸಿಂಗ್ ರಾಜೀನಾಮೆಯ ನಂತರ ಅಧಿವೇಶನವನ್ನು ರದ್ದುಪಡಿಸಲಾಗಿದೆ.
ಸಿಂಗ್ ರಾಜೀನಾಮೆಯನ್ನು ಸ್ವಾಗತಿಸಿರುವ ಎನ್ಪಿಪಿ, ರಾಜ್ಯದಲ್ಲಿ ಶಾಂತಿ ನೆಲಸಲು ಬಿಜೆಪಿ ಜೊತೆ ಸಹಕರಿಸುವ ಬದ್ಧತೆಯನ್ನು ವ್ಯಕ್ತಪಡಿಸಿದೆ. ಈ ಪಕ್ಷಕ್ಕೆ ಏಳು ಶಾಸಕರ ಬಲ ಇದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮರಳಿದ ನಂತರ ಬಿರೇನ್ ಸಿಂಗ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ರಾಜ್ಯದ ಕುಕಿ ಹಾಗೂ ಮೈತೇಯಿ ಸಮುದಾಯಗಳ ನಡುವೆ ಶಾಂತಿ ಸ್ಥಾಪಿಸಲು ಕೇಂದ್ರ ಸರ್ಕಾರ ನಡೆಸುತ್ತಿರುವ ಯತ್ನಗಳಿಗೆ ಸಿಂಗ್ ರಾಜೀನಾಮೆಯಿಂದ ಬಲ ಸಿಗಲಿದೆ ಎಂದು ಬಿಜೆಪಿ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.
ಕೆ. ಮೇಘಚಂದ್ರ ಮಣಿಪುರ ಕಾಂಗ್ರೆಸ್ ಅಧ್ಯಕ್ಷಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ತಮಗೆ ಸೋಲಾಗಲಿದೆ ಎಂಬುದು ಬಿರೇನ್ ಸಿಂಗ್ ಅವರಿಗೆ ಗೊತ್ತಿತ್ತು. ಅವರ ಆಡಳಿತದ ವೈಫಲ್ಯದಿಂದಾಗಿ ರಾಜ್ಯವು ಸಂಘರ್ಷಕ್ಕೆ ಸಿಲುಕಿದೆ.ಶೇಖ್ ನೂರುಲ್ ಹಸನ್ ಎನ್ಪಿಪಿ ಶಾಸಕಾಂಗ ಪಕ್ಷದ ನಾಯಕಬಿರೇನ್ ಸಿಂಗ್ ನಾಯಕತ್ವದಲ್ಲಿ ನಾವು ವಿಶ್ವಾಸ ಕಳೆದುಕೊಂಡಿದ್ದೆವು... ಆದರೆ ಎನ್ಡಿಎ ಮತ್ರಿಕೂಟದ ಪಕ್ಷವಾಗಿ ನಾವು ರಾಜ್ಯದಲ್ಲಿ ಸಹಜ ಸ್ಥಿತಿ ಮರಳಲು ಬಿಜೆಪಿ ಜೊತೆ ಕೆಲಸ ಮಾಡುತ್ತೇವೆಎಂ. ತೆಂಗಿನ್ಮಾಂಗ್ ಹಾವೊಕಿಪ್ ಕುಕಿ ವಿದ್ಯಾರ್ಥಿ ನಾಯಕಬಿರೇನ್ ಸಿಂಗ್ ಅವರು ಉದ್ದೇಶಿತ ಅವಿಶ್ವಾಸ ನಿರ್ಣಯಕ್ಕೆ ಬೆದರಿದ್ದರು. ಅವರ ನೇತೃತ್ವದ ಸರ್ಕಾರ ಉರುಳುವುದು ಖಚಿತವಾಗಿತ್ತು.