ನವದೆಹಲಿ: ಸ್ವಯಂ ಶುದ್ಧೀಕರಣ, ಬಾಹ್ಯದ ಶೀತ ವಾತಾವರಣ ಆಧರಿಸಿ ಬೆಚ್ಚನೆ ಅನುಭವ ನೀಡುವ ಜವಳಿಯನ್ನು ಗುವಾಹಟಿ ಐಐಟಿಯ ಸಂಶೋಧಕರು ತಯಾರಿಸಿದ್ದಾರೆ.
ಶೀತದ ವಾತಾವರಣದಲ್ಲಿ ಅನಾರೋಗ್ಯಕ್ಕೆ ಈಡಾಗುವವರಿಗೆ ಇದು ಅನುಕೂಲಕರವಾಗಿದೆ. 'ನ್ಯಾನೊ ಮೈಕ್ರೊ ಸ್ಮಾಲ್' ನಿಯತಕಾಲಿಕದಲ್ಲಿ ಈ ಕುರಿತು ಲೇಖನ ಪ್ರಕಟವಾಗಿದೆ.
ಐಐಟಿ ಗುವಾಹಟಿ ಸಂಶೋಧಕರ ತಂಡವು, ನವೀನ ರೀತಿಯ ಜವಳಿ ಅಭಿವೃದ್ಧಿ ಪಡಿಸಿದೆ. ಇದು ತೆಳುವಾಗಿದೆ. ಹತ್ತಿಯ ಜೊತೆಗೆ ಅತಿ ತೆಳುವಾದ ಬೆಳ್ಳಿಯ ಎಳೆಗಳನ್ನು ಬಳಸಲಾಗಿದೆ. ಹೀಗಾಗಿ ಈ ಜವಳಿಯು ವಾತಾವರಣಕ್ಕೆ ಅನುಗುಣವಾಗಿ ಬೆಚ್ಚನೆಯ ಅನುಭವವನ್ನು ನೀಡಲಿದೆ' ಎಂದು ಹೇಳಿದ್ದಾರೆ.
'ಈ ಉಡುಪಿಗೆ ಬಳಸಿರುವ ಎಳೆಗಳು ಮನುಷ್ಯನ ಕೂದಲಿಗಿಂತಲೂ ಲಕ್ಷ ಪಟ್ಟು ಹೆಚ್ಚು ತೆಳ್ಳಗಿರಲಿವೆ. ಸೋಲಾರ್ ಶಕ್ತಿ ಆಧರಿಸಿ ಜವಳಿಯು ಬೆಚ್ಚಗಿನ ಅನುಭವ ನೀಡಲಿದೆ' ಎಂದಿದ್ದಾರೆ.
ಹೊಸದಾಗಿ ತಯಾರಿಸಿರುವ ಈ ಜವಳಿಗಾಗಿ ಹಕ್ಕುಸ್ವಾಮ್ಯ ಪಡೆಯಲು ಸಂಶೋಧಕರ ತಂಡವು ಅರ್ಜಿ ಸಲ್ಲಿಸಿದ್ದು, ಆ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ ಎಂದು ಹೇಳಿದ್ದಾರೆ.