ನವದೆಹಲಿ: ಕೇಂದ್ರ ಬಜೆಟ್ ಪ್ರತಿ ಕುಟುಂಬದಲ್ಲೂ ಸಂತೋಷವನ್ನು ತುಂಬಿದೆ ಎಂದು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ, 'ಇಂತಹ ಮಧ್ಯಮ ವರ್ಗದ ಸ್ನೇಹಿ ಬಜೆಟ್ ಮಂಡನೆಯಾಗಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು' ಎಂದು ಭಾನುವಾರ ಹೇಳಿದ್ದಾರೆ.
ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಜೆಟ್ನಲ್ಲಿ ಮಧ್ಯಮ ವರ್ಗದವರಿಗೆ ನೀಡಿರುವ ಕೊಡುಗೆಗಳನ್ನು ಪ್ರಸ್ತಾಪಿಸಿದರು.
'₹12 ಲಕ್ಷದವರೆಗೆ ಆದಾಯ ಹೊಂದಿರುವವರ ಮೇಲಿನ ತೆರಿಗೆಯ ಭಾರ ಸ್ವಾತಂತ್ರ್ಯಾ ನಂತರ ಈ ರೀತಿಯಲ್ಲಿ ಒಮ್ಮೆಯೂ ತಗ್ಗಿಯೇ ಇಲ್ಲ' ಎಂದರು.
ಆಮ್ ಆದ್ಮಿ ಪಕ್ಷ ಸರ್ಕಾರವು ಸುಳ್ಳು ಭರವಸೆಗಳನ್ನು ನೀಡುತ್ತಾ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ ಪ್ರಧಾನಿ, 'ಎಎಪಿ ಸರ್ಕಾರದ ಕೆಟ್ಟ ನೀತಿಗಳಿಂದಾಗಿ ಹಲವು ಕಾರ್ಖಾನೆಗಳ ಬಾಗಿಲು ಮುಚ್ಚಿವೆ. ಜನರನ್ನು ಲೂಟಿ ಮಾಡಿದವರು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ' ಎಂದು ಎಚ್ಚರಿಸಿದರು.
'ಎಎಪಿಯ ಸುಳ್ಳು ಭರವಸೆಗಳು ಒಂದೆಡೆಯಾದರೆ, ಮೋದಿ ಅವರ ಗ್ಯಾರಂಟಿಗಳು ಇನ್ನೊಂದೆಡೆ. ಎಎಪಿಯು ತನ್ನ 11 ವರ್ಷಗಳ ಆಡಳಿತದಲ್ಲಿ ರಾಷ್ಟ್ರದ ರಾಜಧಾನಿಯನ್ನು ವಿನಾಶದತ್ತ ತಳ್ಳಿದೆ. ದೆಹಲಿಯ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಬದ್ಧವಾಗಿರುವ ಡಬಲ್ ಎಂಜಿನ್ ಸರ್ಕಾರವನ್ನು ಚುನಾಯಿಸಲು ಜನರು ತೀರ್ಮಾನಿಸಿದ್ದಾರೆ' ಎಂದು ಹೇಳಿದರು.
ಬಿಜೆಪಿ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, 'ಫೆಬ್ರವರಿ 8 ರಂದು ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಮತ್ತು ಮಾರ್ಚ್ 8ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರಿಗೆ (ಬಿಜೆಪಿ ನೀಡಿರುವ ಭರವಸೆಯಂತೆ) ₹2,500 ನೆರವು ಸಿಗಲಾರಂಭಿಸುತ್ತದೆ' ಎಂದು ತಿಳಿಸಿದರು.