ಜೈಪುರ: ರಾಜಸ್ಥಾನ ಸರ್ಕಾರ, 'ಕಾನೂನು ಬಾಹಿರ ಮತಾಂತರ ನಿಷೇಧ ಮಸೂದೆ- 2025' ಅನ್ನು ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಂಡಿಸಿದೆ.
ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿನ್ವಸರ್ ಅವರು ಈ ಮಸೂದೆಯನ್ನು ಸೋಮವಾರ ಮಂಡಿಸಿದರು.
ಮಸೂದೆಯಲ್ಲಿರುವ ಪ್ರಮುಖಾಂಶಗಳು:
ಕಾನೂನು ಬಾಹಿರವಾಗಿ ನಡೆಯುವ ಧಾರ್ಮಿಕ ಮತಾಂತರವು ಜಾಮೀನು ರಹಿತ ಅಪರಾಧವಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಒಳಪಡಬೇಕು
ಅಪರಾಧಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 50,000ದವರೆಗೆ ದಂಡ ವಿಧಿಸಲು ಅವಕಾಶವಿದೆ
ಬಲವಂತ, ಪ್ರಭಾವ, ಬಲಾತ್ಕಾರ, ಆಮಿಷ ಅಥವಾ ಯಾವುದೇ ಮೋಸ ವಿಧಾನದ ವಿವಾಹದ ಮೂಲಕ ನಡೆಯುವ ಮತಾಂತರ ಅಪರಾಧ
ಈ ಅಪರಾಧಕ್ಕೆ ಒಂದು ವರ್ಷಕ್ಕಿಂತ ಕಡಿಮೆಯಿಲ್ಲದ ಅವಧಿಗೆ ಜೈಲು ಶಿಕ್ಷೆಗೆ ಅವಕಾಶವಿದೆ. ಅದನ್ನು ₹ 15,000 ದಂಡದೊಂದಿಗೆ ಐದು ವರ್ಷಗಳವರೆಗೂ ವಿಸ್ತರಿಸಬಹುದು
ಅಪ್ರಾಪ್ತ ವಯಸ್ಕರು, ಮಹಿಳೆಯರು ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗೆ ಸಂಬಂಧಿಸಿದಂತೆ ನಿಯಮಗಳನ್ನು ಉಲ್ಲಂಘಿಸುವವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ. ಅದನ್ನು ₹ 25,000 ದಂಡದೊಂದಿಗೆ ಐದು ವರ್ಷಗಳವರೆಗೆ ವಿಸ್ತರಿಸಬಹುದು
ಸಾಮೂಹಿಕ ಮತಾಂತರ ಅಪರಾಧಕ್ಕೆ ಮೂರು ವರ್ಷಗಳ ಜೈಲು ಶಿಕ್ಷೆ. ಅದನ್ನು ₹ 50,000 ದಂಡದೊಂದಿಗೆ 10 ವರ್ಷಗಳವರೆಗೆ ವಿಸ್ತರಿಸಬಹುದು
ಮತಾಂತರ ಬಯಸುವವರು ಕನಿಷ್ಠ 60 ದಿನಗಳ ಮುಂಚಿತವಾಗಿ ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿ ಬಳಿ ಘೋಷಣೆ ಮಾಡಿಕೊಳ್ಳಬೇಕು
ಮತಾಂತರದ ಸಂತ್ರಸ್ತರಿಗೆ ಆರೋಪಿಯಿಂದ ಗರಿಷ್ಠ ₹ 5 ಲಕ್ಷದವರೆಗೆ ಪರಿಹಾರವನ್ನು ನ್ಯಾಯಾಲಯ ಕೊಡಿಸಬಹುದು. ಪುನರಾವರ್ತಿತ ಅಪರಾಧಕ್ಕೆ ದುಪ್ಪಟ್ಟು ಶಿಕ್ಷೆ ವಿಧಿಸಬಹುದು.
ಎಲ್ಲ ಜನರ ಧಾರ್ಮಿಕ ಸ್ವಾತಂತ್ರ್ಯ ಖಾತರಿಪಡಿಸುವ ಮತ್ತು ಸಾಮಾಜಿಕ ಸಾಮರಸ್ಯ ಕಾಯ್ದುಕೊಳ್ಳುವ ಗುರಿ ಮತ್ತು ಉದ್ದೇಶವನ್ನು ಮಸೂದೆ ಹೊಂದಿದೆ ಎಂದು ಹೇಳಲಾಗಿದೆ.