ಹೈದರಾಬಾದ್: ಶಿಕ್ಷಕರೊಬ್ಬರು ಕಪಾಳಕ್ಕೆ ಹೊಡೆದು, ಛೀಮಾರಿ ಹಾಕಿದ ಕಾರಣಕ್ಕೆ ಖಾಸಗಿ ಶಾಲೆಯೊಂದರ 8ನೇ ತರಗತಿ ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಜಿಗಿದು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಬೆಳಿಗ್ಗೆ 9.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಸಿಸಿಟಿವಿ ಕ್ಯಾಮೆರಾದ ದಿಕ್ಕನ್ನು ತಿರುಗಿಸಿದ್ದಕ್ಕಾಗಿ 14 ವರ್ಷದ ಬಾಲಕನಿಗೆ ತರಗತಿಯೊಳಗೆ ಇತರ ವಿದ್ಯಾರ್ಥಿಗಳ ಎದುರು ದೈಹಿಕ ಶಿಕ್ಷಣ ಶಿಕ್ಷಕರು ಕಪಾಳಕ್ಕೆ ಹೊಡೆದು, ಛೀಮಾರಿ ಹಾಕಿದ್ದಾರೆ. ಇದರಿಂದ ಅವಮಾನವಾಯಿತೆಂದು ಭಾವಿಸಿದ ವಿದ್ಯಾರ್ಥಿ, ಶೌಚಾಲಯಕ್ಕೆ ಹೋಗಬೇಕೆಂದು ಶಿಕ್ಷಕರಿಂದ ಅನುಮತಿ ಪಡೆದು ತರಗತಿಯಿಂದ ಹೊರಹೋಗಿ, ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದಿದ್ದಾನೆ. ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
'ಪ್ರಾಣ ಕಳೆದುಕೊಳ್ಳುತ್ತಿರುವುದಕ್ಕೆ ತನ್ನ ತಾಯಿ ಬಳಿ ಕ್ಷಮೆಕೋರಿ ಬಾಲಕ ಮರಣ ಪೂರ್ವ ಪತ್ರ ಬರೆದು ನೋಟ್ ಪುಸ್ತಕದಲ್ಲಿಟ್ಟಿರುವುದು ಕಂಡುಬಂದಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.