ನವದೆಹಲಿ: ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗುವುದಕ್ಕೂ ಮುನ್ನವೇ ಚುನಾವಣೆಯಲ್ಲಿ ಭಾರಿ ಸದ್ದು ಮಾಡಿದ್ದ ಯಮುನಾ ನದಿ ಶುದ್ಧೀಕರಣದ ಕೆಲಸಗಳು ಭಾನುವಾರದಿಂದ ಆರಂಭವಾಗಿವೆ.
ಟ್ರ್ಯಾಶ್ ಸ್ಕಿಮ್ಮರ್, ವೀಡ್ ಹಾರ್ವೆಸ್ಟರ್ ಮತ್ತು ಡ್ರೆಡ್ಜರ್ ಯಂತ್ರಗಳು ನದಿ ತೀರಕ್ಕೆ ಧಾವಿಸಿದ್ದು, ಕೆಲಸ ಪ್ರಾರಂಭವಾಗಿದೆ ಎಂದು ರಾಜಭವನದ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿ ನಡುವಿನ ಸಭೆಯ ನಂತರ ಯಮುನಾ ನದಿ ಸ್ವಚ್ಛಗೊಳಿಸಲು ತಕ್ಷಣದ ನಿರ್ದೇಶನ ನೀಡಲಾಯಿತು.
ಯಮುನಾ ನದಿ ಶುದ್ಧೀಕರಣ ಬಿಜೆಪಿಯ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ.
ಯುಮುನಾ ನದಿ ಶುದ್ಧೀಕರಣವನ್ನು ನಾಲ್ಕು ಹಂತಗಳಲ್ಲಿ ನಿರ್ವಹಿಸಲಾಗುತ್ತದೆ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮೊದಲಿಗೆ ಯಮುನಾ ನದಿಯಲ್ಲಿನ ಕಸ, ಹೂಳು ತೆಗೆಯಲಾಗುವುದು. ನಂತರ ನಜಾಫ್ಗಢ್ ಡ್ರೈನ್, ಸಪ್ಲಿಮೆಂಟರಿ ಡ್ರೈನ್ ಮತ್ತು ಇತರ ಎಲ್ಲಾ ಪ್ರಮುಖ ಚರಂಡಿಗಳಲ್ಲಿ ಶುಚಿಗೊಳಿಸುವ ಕಾರ್ಯಗಳು ಪ್ರಾರಂಭವಾಗುತ್ತವೆ ಎಂದು ತಿಳಿಸಿದೆ.
ಏತನ್ಮಧ್ಯೆ, ಕೈಗಾರಿಕಾ ಘಟಕಗಳಿಂದ ಸಂಸ್ಕರಿಸದ ತ್ಯಾಜ್ಯವನ್ನು ಚರಂಡಿಗಳಿಗೆ ಬಿಡುವುದರ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವಂತೆ ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಗೆ ನಿರ್ದೇಶನ ನೀಡಿದ್ದಾರೆ.
ಫೆ.8ರಂದು ಬಿಜೆಪಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಮಾಲಿನ್ಯ ಮುಕ್ತ ಯಮುನಾಕ್ಕಾಗಿ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದ್ದರು.