ತಿರುವನಂತಪುರ: ಕೇರಳ ಸರ್ಕಾರವನ್ನು ಶ್ಲಾಘಿಸಿದ ಬಳಿಕ ಪೇಚಿಗೆ ಸಿಲುಕಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಈಗ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ.
'ನಾನು ಕೇರಳದ ಸಿಪಿಐ(ಎಂ) ನೇತೃತ್ವದ ಸರ್ಕಾರವನ್ನು ಹೊಗಳಲಿಲ್ಲ. ಬದಲಿಗೆ ನವೋದ್ಯಮ (ಸ್ಟಾರ್ಟ್ಅಪ್) ಕ್ಷೇತ್ರದಲ್ಲಿ ರಾಜ್ಯದ ಪ್ರಗತಿಯನ್ನಷ್ಟೇ ಉಲ್ಲೇಖಿಸಿದ್ದೇನೆ' ಎಂದು ತಿರುವನಂತಪುರದ ಸಂಸದ ಹೇಳಿದ್ದಾರೆ.
ಆಂಗ್ಲ ದಿನಪತ್ರಿಕೆಯಲ್ಲಿ ಶಶಿ ತರೂರ್ ಬರೆದ ಲೇಖನವು ಕೇರಳದ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತಕ್ಕೆ ಕಾರಣವಾಗಿತ್ತು. ಮತ್ತೊಂದೆಡೆ ಆಡಳಿತಾರೂಢ ಎಡಪಕ್ಷಗಳು ತರೂರ್ ಹೇಳಿಕೆಯನ್ನು ಸ್ವಾಗತಿಸಿದ್ದವು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, 'ನನ್ನ ಲೇಖನದಲ್ಲಿ ಯಾವುದೇ ರಾಜಕೀಯ ಉಲ್ಲೇಖ ಇರಲಿಲ್ಲ. ಕೇರಳದ ಉದ್ಯಮಶೀಲತೆ ಮತ್ತು ನಾವೀನ್ಯತೆಯ ಬೆಳವಣಿಗೆ ಕುರಿತು ಪ್ರತಿಪಾದಿಸಿದ್ದೇನೆ. ರಾಜ್ಯದ ಅಭಿವೃದ್ಧಿವನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಮಾಡಿದ್ದೇನೆ' ಎಂದು ಹೇಳಿದ್ದಾರೆ.
'ಗ್ಲೋಬಲ್ ಸ್ಟಾರ್ಟ್ಅಪ್ ಇಕೊಸಿಸ್ಟಂ 2024 ವರದಿ ಆಧರಿಸಿ ನಾನು ಲೇಖನವನ್ನು ಬರೆದಿದ್ದೇನೆ. ಕೇರಳವು 18 ತಿಂಗಳಲ್ಲಿ 1.7 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆಯನ್ನು ಆಕರ್ಷಿಸಿದೆ ಎಂದು ವರದಿಯಲ್ಲಿದೆ' ಎಂದು ತರೂರ್ ತಿಳಿಸಿದ್ದಾರೆ.
'ಆದರೂ ಕೇರಳದಲ್ಲಿ ಒಟ್ಟಾರೆ ಕೈಗಾರಿಕಾ ವಾತಾವರಣ ಬದಲಾಗಿದೆ ಎಂದು ನಂಬುವುದಿಲ್ಲ. ಕೇರಳ ಈಗಲೂ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ಶೇ 80ರಷ್ಟು ಸಾರ್ವಜನಿಕ ಉದ್ದಿಮೆಗಳು (ಪಿಎಸ್ಯು) ನಷ್ಟದಲ್ಲಿವೆ' ಎಂದು ಅವರು ಹೇಳಿದ್ದಾರೆ.
'ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ರಾಜ್ಯದಲ್ಲಿ ಪ್ರಗತಿಗೆ ಅಡಿಪಾಯ ಹಾಕಿದರು. ಸ್ಟಾರ್ಟ್ಅಪ್ ವಿಲ್ಲೇಜ್, ಸ್ಟಾರ್ಟ್ಅಪ್ ಮಿಷನ್ ಸೇರಿದಂತೆ ಹಲವಾರು ಉಪಕ್ರಮಗಳನ್ನು ಆರಂಭಿಸಿದರು. ಈಗಿನ ಸರ್ಕಾರವು ಅದನ್ನು ಮುನ್ನಡೆಸಿಕೊಂಡು ಹೋಗುತ್ತಿದೆ' ಎಂದು ಅವರು ಹೇಳಿದ್ದಾರೆ.