ಚಂಡೀಗಢ: ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗೆ ಮತ್ತೊಂದು ಸುತ್ತಿನ ಮಾತುಕತೆಯನ್ನು ಕೇಂದ್ರ ಸರ್ಕಾರ ಇಂದು (ಶನಿವಾರ) ಸಂಜೆ ನಡೆಸಲಿದೆ.
ಸಂಜೆ 6 ಗಂಟೆಗೆ ಸಭೆ ನಡೆಯಲಿದೆ. ಫೆ.14 ರಂದು ನಡೆದ ಕೊನೆಯ ಸಭೆಯಲ್ಲಿ ಮಾತನಾಡಿದ್ದ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮುಂದಿನ ಸಭೆಯನ್ನು(ಫೆ.22) ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆಸಲಾಗುವುದು. ಆ ಸಭೆಯಲ್ಲಿ ತಾವು ಕೂಡ ಭಾಗವಹಿಸುವುದಾಗಿ ಹೇಳಿದ್ದರು.
ಮುಂದಿನ ಸಭೆಯನ್ನು ದೆಹಲಿಯಲ್ಲಿ ನಡೆಸುವಂತೆ ರೈತರು ಸರ್ಕಾರವನ್ನು ಕಳೆದ ಸಭೆಯಲ್ಲಿ ಕೋರಿದ್ದರು. ಆದರೆ ಕೇಂದ್ರ ಸರ್ಕಾರ ಸಭೆಯನ್ನು ಚಂಡೀಗಢದಲ್ಲಿ ನಿಗದಿ ಮಾಡಿತ್ತು.
ಇಂದು ಕೇಂದ್ರದೊಂದಿಗೆ 6ನೇ ಸುತ್ತಿನ ಮಾತುಕತೆ ನಡೆಯಲಿದೆ. ಕೇಂದ್ರ ಕೃಷಿ ಸಚಿವರು ಮತ್ತು ಇತರ ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ನಮಗಿದೆ. ಕೆಎಂಎಂ ಮತ್ತು ಎಸ್ಕೆಎಂ (ರಾಜಕೀಯೇತರ) ನಿಯೋಗ ಸಭೆಯಲ್ಲಿ ಭಾಗವಹಿಸಲಿದೆ ಎಂದು ರೈತ ನಾಯಕ ಸರವಣ ಸಿಂಗ್ ಪಂಡೇರ್ ಹೇಳಿದ್ದಾರೆ.
ಚಂಡೀಗಢದಲ್ಲಿ ಕಳೆದ 14ರಂದು ಎಸ್ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಜತೆ ನಡೆದ ಸಭೆಯ ಮುಂದುವರಿದ ಭಾಗ ಇದೇ 22 ರಂದು (ಶನಿವಾರ) ನಡೆಯಲಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಪೂರ್ಣ ಚಂದ್ರ ಕೃಷ್ಣ ಅವರು ಫೆಬ್ರವರಿ 19 ರಂದು ರೈತ ನಾಯಕರಾದ ಜಗಜಿತ್ ಸಿಂಗ್ ಡಲ್ಲೇವಾಲ್ ಮತ್ತು ಸರವಣ ಸಿಂಗ್ ಪಂಡೇರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.